ADVERTISEMENT

ನಿರಂತರ ಪರಿಶ್ರಮ ಇದ್ದರೆ ಗುರಿ ಮುಟ್ಟಲು ಸಾಧ್ಯ: ಕ್ರೀಡಾಪಟು ಅರ್ಜುನ್ ದೇವಯ್ಯ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2019, 14:06 IST
Last Updated 21 ಡಿಸೆಂಬರ್ 2019, 14:06 IST
ಶಾಲಾ ಆಡಳಿತ ಮಂಡಳಿ ವತಿಯಿಂದ ಆರ್ಜುನ್ ದೇವಯ್ಯ ಅರನ್ನು ಸನ್ಮಾನಿಸಲಾಯಿತು
ಶಾಲಾ ಆಡಳಿತ ಮಂಡಳಿ ವತಿಯಿಂದ ಆರ್ಜುನ್ ದೇವಯ್ಯ ಅರನ್ನು ಸನ್ಮಾನಿಸಲಾಯಿತು   

ದೇವನಹಳ್ಳಿ‌: ಮಕ್ಕಳು ತಳಮಟ್ಟದಿಂದಲೇ ನಿರಂತರ ಕಠಿಣ ಪರಿಶ್ರಮಪಟ್ಟರೆ ಮಾತ್ರ ಸಾಧನೆ ಎಂಬ ಗುರಿ ಮುಟ್ಟಲು ಸಾಧ್ಯ ಎಂದು ಅಂತರರಾಷ್ಟ್ರೀಯ ಅಥ್ಲೆಟಿಕ್‌ ಕ್ರೀಡಾಪಟು ಅರ್ಜುನ್ ದೇವಯ್ಯ ಹೇಳಿದರು.

ಇಲ್ಲಿನ ಕನ್ನಮಂಗಲ ಮಾರುತಿ ವಿದ್ಯಾಮಂದಿರ ಶಾಲಾ ಆವರಣದಲ್ಲಿ ನಡೆದ 2019–20ನೇ ಸಾಲಿನ ಚಿಣ್ಣರಹಬ್ಬಉದ್ಘಾಟಿಸಿ ಮಾತನಾಡಿದರು.

‘ಒಬ್ಬ ವ್ಯಕ್ತಿಯ ಮೌಲ್ಯ ಅವರ ಸಮಾಜ ಸೇವೆ ಮತ್ತು ಕ್ರೀಡಾ ವ್ಯಕ್ತಿತ್ವದಿಂದ ಅಳೆಯಲಾಗುತ್ತದೆಯೇ ಹೊರತು ಹಣ ಮತ್ತು ತೋಳ್ಬಲದಿಂದ ಅಲ್ಲ. ಉತ್ತಮ ಆರೋಗ್ಯ ಹಣದಿಂದ ಖರೀದಿಸಲು ಸಾಧ್ಯವಿಲ್ಲ. ದೇಹದ ಆರೋಗ್ಯ ನಾವೇ ಕಾಯ್ದುಕೊಳ್ಳಬೇಕು. ಬೇರೆಯವರಿಂದ ಸಾಧ್ಯವಿಲ್ಲ. ಆದರೆ, ಮಾರ್ಗದರ್ಶನ ಪಡೆಯಬಹುದು ಎಂದು ಹೇಳಿದರು.

ADVERTISEMENT

ಶೈಕ್ಷಣಿಕ ವ್ಯವಸ್ಥೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆ ಅತಿಮುಖ್ಯ, ಶಿಕ್ಷಕರು ಪ್ರತಿಭೆ ಗುರುತಿಸಿದರೂ ಪೋಷಕರ ಸಹಕಾರವಿಲ್ಲದೆ ಏನು ಮಾಡಲು ಸಾಧ್ಯವಿಲ್ಲ. ಪೋಷಕರ ಸಹಕಾರದಿಂದಲೇ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಅರ್ಜುನ್‌ ಹೇಳಿದರು.

ಶಾಲಾ ಆಡಳಿತ ಮಂಡಳಿ ಸಂಸ್ಥಾಪಕ ಅಧ್ಯಕ್ಷ ಕೆ.ಶ್ರೀನಿವಾಸ್ ಮಾತನಾಡಿ,ಶಾಲೆ ಆರಂಭಗೊಂಡಾಗ ಕೇವಲ 12 ವಿದ್ಯಾರ್ಥಿಗಳಿದ್ದರು. ಪ್ರಸ್ತುತ 3ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. 27ವರ್ಷಗಳ ಸುದೀರ್ಘ ಶೈಕ್ಷಣಿಕ ವ್ಯವಸ್ಥೆಯಲ್ಲಿ 18ಬಾರಿ ಎಸ್ಸೆಸ್ಸೆಲ್ಸಿ ಫಲಿತಾಂಶ ಶೇಕಡ 100ರಷ್ಟು ಪಡೆದಿದೆ. ಶಿಕ್ಷಕರ ಮತ್ತು ಆಡಳಿತ ಮಂಡಳಿಯ ಶ್ರಮ ಇದರಲ್ಲಿ ಆಡಗಿದೆ ಎಂದರು.

ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ರಾಧಾ ಶ್ರೀನಿವಾಸ್, ಖಜಾಂಚಿ ಗಿರಿಜಾ ಶ್ರೀನಿವಾಸ್, ಆಡಳಿತಾಧಿಕಾರಿ ಗೌರವ್ ಗೌಡ, ಕೆ.ಪಿ.ಸಿ.ಸಿ.ಹಿಂದುಳಿದ ವರ್ಗ ರಾಜ್ಯ ಘಟಕ ಉಪಾಧ್ಯಕ್ಷ ಸಿ.ಜಗನ್ನಾಥ್, ಮುಖಂಡ ಜೋಗಿಹಳ್ಳಿ ಎ.ಸೋಮಣ್ಣ, ಶಿಕ್ಷಣಾಧಿಕಾರಿ ಹನುಮಂತಪ್ಪ, ಪ್ರಾಂಶುಪಾಲರಾದ ಹೇಮಲತಾ ಖತ್ರಿ, ರಾಮಚಂದ್ರಪ್ಪ, ಮುಖ್ಯ ಶಿಕ್ಷಕಿ ಗೀತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.