ADVERTISEMENT

‘ಶಿಕ್ಷಕರು ನಿರ್ಲಕ್ಷ್ಮವಹಿಸಿದರೆ ಸಮಾಜ ಹಾಳು’

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 13:26 IST
Last Updated 18 ಜನವರಿ 2019, 13:26 IST
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕರೀಗೌಡ 
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಕರೀಗೌಡ    

ದೇವನಹಳ್ಳಿ: ಒಬ್ಬ ಅಧಿಕಾರಿ ಭ್ರಷ್ಟಾಚಾರ ಮಾಡಿ ಉದ್ಯೋಗ ಕಳೆದುಕೊಂಡರೆ ಒಂದು ಕುಟುಂಬಕ್ಕೆ ಹಾನಿ. ಒಬ್ಬ ಶಿಕ್ಷಕ ಬೋಧನೆಯಲ್ಲಿ ನಿರ್ಲಕ್ಷ್ಯವಹಿಸಿದರೆ ಸಮಾಜ ಹಾಳು ಮಾಡಿದಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಕರೀಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ವಿಶ್ವನಾಥಪುರ ಸರ್ಕಾರಿ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ನಡೆದ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾಧಿಕಾರಿಯಾಗಿ ಇಲ್ಲಿಗೆ ಬಂದ ನಂತರ ಆನೇಕ ಪ್ರೌಢಶಾಲೆಗಳಿಗೆ ಭೇಟಿ ನೀಡಿ ಹತ್ತನೇ ತರಗತಿ ಗಣಿತ ವಿಷಯದ ಮೂರು ಪ್ರಶ್ನೆ ಕೇಳಿದೆ. ಯಾವೊಬ್ಬ ವಿದ್ಯಾರ್ಥಿ ಬಾಯಿ ಬಿಡಲಿಲ್ಲ ಎಂದರೆ ಶಿಕ್ಷಕರ ಬೋಧನೆ ಯಾವ ಮಟ್ಟದಲ್ಲಿದೆ. ಶಿಕ್ಷಕರಲ್ಲಿ ಅತ್ಮ ವಿಶ್ವಾಸವಿಲ್ಲದಿದ್ದರೆ ಮಕ್ಕಳಲ್ಲಿ ಹೇಗೆ ಬರುತ್ತದೆ ? ವೇತನ ಪಡೆಯುವ ಶಿಕ್ಷಕರಿಗೆ ನೈತಿಕತೆ ಇಲ್ಲದಿದ್ದರೆ ಹೇಗೆ ? ಕನಿಷ್ಠ ಮಟ್ಟದ ಅಂಕಗಳಿಕೆಗೂ ವಿದ್ಯಾರ್ಥಿಗಳಲ್ಲಿ ಆಸಕ್ತಿ ಇಲ್ಲ. ಇಂತಹ ಶಿಕ್ಷಕರನ್ನು ವರ್ಗಾವಣೆ ಮಾಡಬೇಕು ಎಂದು ಹರಿಹಾಯ್ದರು.

ಐದಾರು ವರ್ಷ ಕಳೆದ ನಂತರ ವಿದ್ಯಾರ್ಥಿಗಳು ಶೈಕ್ಷಣಿಕೆ ಕ್ಷೇತ್ರದಿಂದ ಹೊರಗೆ ಇರುತ್ತಾರೆ. ಶಿಕ್ಷಕರು ಸರಿಯಾಗಿ ಬೋಧನೆ ಮಾಡಿದ ಪರಿಣಾಮ ಶಿಕ್ಷಣ ಮೊಟಕಾಯಿತು ಎಂದು ವಿದ್ಯಾರ್ಥಿಗಳು ಶ‍ಪಿಸುವಂತೆ ಆಗುತ್ತದೆ. ‘ನಾನು ಕೂಡ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ ಜಿಲ್ಲಾಧಿಕಾರಿಯಾಗಿದ್ದೇನೆ‌. ಬಾಲ್ಯದಲ್ಲಿ ಉತ್ತಮ ಶಿಕ್ಷಣದ ಅಡಿಪಾಯ ಹಾಕಿದ ಶಿಕ್ಷಕರು ಸಂಪರ್ಕದಲ್ಲಿದ್ದಾರೆ’ ಎಂದರು.

ADVERTISEMENT

ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಾ ಜಗದೀಶ್ ಮಾತನಾಡಿ, ಸರ್ಕಾರ 2018ನೇ ಸಾಲಿನಿಂದ ರಾಜ್ಯದಲ್ಲಿ 176ಕರ್ನಾಟಕ ಪಬ್ಲಿಕ್ ಶಾಲೆ ಆರಂಭ ಮಾಡಿ 1ನೇ ತರಗತಿಯಿಂದ 12ನೇ ತರಗತಿಯವರಿಗೆ ಒಂದೆ ಕಡೆ ಶಿಕ್ಷಣ ನೀಡಲು ಮುಂದಾಗಿದ್ದು ಆ ಶಾಲೆಗಳ ಪೈಕಿ ವಿಶ್ವನಾಥಪುರ ಶಾಲೆಯೂ ಒಂದು ಎಂಬುದು ಸಂತಸವಾಗಿದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಜಗದೀಶ್, ಎಸ್ ಡಿಎಂಸಿ ಅಧ್ಯಕ್ಷ ಶಿವಣ್ಣ, ಪ್ರಾಂಶು ಪಾಲರಾದ ವಾಣಿಶ್ರೀ, ಪ್ರೌಢಶಾಲಾ ಮುಖ್ಯ ಶಿಕ್ಷಕ ರುದ್ರಪ್ಪ, ಕೆನರಾ ಬ್ಯಾಂಕ್ ಶಾಖಾ ವ್ಯವಸ್ಥಾಪಕ ರಾಮಾಂಜಿನಪ್ಪ, ಬಿಬಿಎಂಪಿ ಲಗ್ಗರೆ ವಾರ್ಡಿನ ಸದಸ್ಯ ನಾರಾಯಣಸ್ವಾಮಿ, ಶಿಕ್ಷಕರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.