ADVERTISEMENT

ಕೋಡಿಪಾಳ್ಯಕ್ಕೆ ಐಜಿಪಿ ಶರತ್‌ಚಂದ್ರ ಭೇಟಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2020, 15:43 IST
Last Updated 17 ಏಪ್ರಿಲ್ 2020, 15:43 IST
ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ ಅವರು ಕೋಡಿಪಾಳ್ಯ ಗ್ರಾಮಕ್ಕೆ ಭೇಟಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು
ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ ಅವರು ಕೋಡಿಪಾಳ್ಯ ಗ್ರಾಮಕ್ಕೆ ಭೇಟಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದರು   

ದೊಡ್ಡಬಳ್ಳಾಪುರ: ಲಾಕ್‌ಡೌನ್‌ ಪಾಲನೆ ಹಾಗೂ ಸಾರ್ವಜನಿಕರಿಗೆ ದಿನ‌ನಿತ್ಯದ ಅಗತ್ಯ ವಸ್ತುಗಳು ಸಮಪರ್ಕವಾಗಿ ದೊರೆಯುತ್ತಿರುವ ಬಗ್ಗೆ ಪರಿಶೀಲಿಸಲು ಶುಕ್ರವಾರ ಕೇಂದ್ರ ವಲಯ ಐಜಿಪಿ ಶರತ್‌ಚಂದ್ರ ತಾಲ್ಲೂಕಿನ ಕೋಡಿಪಾಳ್ಯ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಈ ಸಂದರ್ಭದಲ್ಲಿ ಪೊಲೀಸ್‌ ಹಾಗೂ ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ ಅವರು, ಲಾಕ್‌ಡೌನ್‌ ಜಾರಿ ಸಮರ್ಪಕವಾಗಿ ಪಾಲನೆಯಾಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಎಲ್ಲ ಸರ್ಕಾರಿ ಇಲಾಖೆಗಳ ಅಧಿಕಾರಿಗಳ ಮೇಲೆ ಇದೆ. ಇದು ಪೊಲೀಸರ ಕೆಲಸ ಮಾತ್ರ ಎನ್ನುವ ಮನೋಭಾವನೆ ಯಾರಲ್ಲೂ ಬರಬಾರದು. ಸಾರ್ವಜನಿಕರು ಸಹ ಪ್ರತಿನಿತ್ಯ ಪತ್ರಿಕೆಗಳಲ್ಲಿ ಬರುವ ಸರ್ಕಾರದ ಸೂಚನೆ ಓದಿಕೊಂಡು ಅದರಂತೆ ನಡೆದುಕೊಳ್ಳಬೇಕು. ಕೊರೊನಾ ಸೋಂಕಿನ ವಿರುದ್ಧ ಹೋರಾಟಕ್ಕೆ ಸದ್ಯಕ್ಕೆ ಇರುವ ಏಕೈಕ ಅಸ್ತ್ರ ಮನೆಯಲ್ಲಿಯೇ ಇರುವುದು. ಅನಿವಾರ್ಯ ಸಂದರ್ಭಗಳಲ್ಲಿ ಹೊರಗೆ ಬಂದಾಗ ಅಂತರ ಕಾಪಾಡಿಕೊಂಡು ನಿಲ್ಲುವುದು. ಇದನ್ನು ಎಲ್ಲರೂ ಅರ್ಥಮಾಡಿಕೊಂಡು ಪಾಲನೆ ಮಾಡಬೇಕು ಎಂದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಬೈಲನರಸಾಪುರ, ದೊಡ್ಡಬಳ್ಳಾಪುರ ತಾಲ್ಲೂಕಿನ ಕೋಡಿಪಾಳ್ಯ ಗ್ರಾಮವನ್ನು ಮಾತ್ರ ಸೀಲ್‌ಡೌನ್‌ ಮಾಡಲಾಗಿದೆ. ಇಲ್ಲಿನ ಜನರು ಮನೆಯಿಂದ ಹೊರಬರದಂತೆ ಅಗತ್ಯ ಇರುವ ಸೌಲಭ್ಯ ಜಿಲ್ಲಾಡಳಿತ ಸಮರ್ಪಕವಾಗಿ ಕಲ್ಪಿಸಿದೆ ಎಂದರು.

ADVERTISEMENT

ಕೋಡಿಪಾಳ್ಯದಲ್ಲಿ ಒಬ್ಬ ವ್ಯಕ್ತಿಗೆ ಕೋವಿಡ್‌-19 ಸೋಂಕು ದೃಢಪಟ್ಟ ನಂತರ ಗ್ರಾಮದ ಸುತ್ತಲು ಕೈಗೊಂಡಿರುವ ಬಂದೋಬಸ್ತ್‌ ಕುರಿತು ಡಿವೈಎಸ್‌ಪಿ ಟಿ.ರಂಗಪ್ಪ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್‌, ಜಿಲ್ಲಾ ಪಂಚಾಯಿತಿ ಸದಸ್ಯ ಜಿ.ಚುಂಚೇಗೌಡ, ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವ ಎಸ್‌.ಗೌಡ, ಸಬ್‌ಇನ್‌ಸ್ಪೆಕ್ಟರ್‌ ವಿ.ಗಜೇಂದ್ರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.