ದೊಡ್ಡಬಳ್ಳಾಪುರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಕೊನಘಟ್ಟ ಗ್ರಾಮ ಮಾರ್ಗದಾಂಬಾ ದೇವಿ ಅಮ್ಮನ ಕೆರೆ ಬಳಕೆದಾರರ ಸಂಘದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕೊನಘಟ್ಟ ಕೆರೆ ಹೂಳೆತ್ತುವ ಕಾಮಗಾರಿಗೆ ಶಾಸಕ ಟಿ.ವೆಂಕಟರಮಣಯ್ಯ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ‘ಗ್ರಾಮಗಳು ಉಳಿಯಬೇಕೆಂದರೆ ನೀರಿನ ಮೂಲ ಅತ್ಯಗತ್ಯ. ಈ ಮೂಲಕ ರೈತರ ಬದುಕು ಕಟ್ಟಿಕೊಡಲು ಸಾಧ್ಯ. ಹೀಗಾಗಿ ಕೆರೆಗಳ ಅಭಿವೃದ್ಧಿ ಮೊದಲ ಆದ್ಯತೆಯಾಗಬೇಕಿದೆ. ಈ ನಿಟ್ಟಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆ ಕಾರ್ಯ ಶ್ಲಾಘನೀಯ’ ಎಂದರು.
ಯೋಜನೆಯ ವಿಭಾಗೀಯ ಅಧ್ಯಕ್ಷ ಸತೀಶ್ ನಾಯ್ಕ್ ಮಾತನಾಡಿ, ‘ಈಗಾಗಲೆ ತಾಲ್ಲೂಕಿನಲ್ಲಿ ಶಿವಪುರ, ಹೊನ್ನಾವರ ಹಾಗೂ ಬೆಂಗಳೂರು ಉತ್ತರ ಸೇರಿದಂತೆ ನಾಲ್ಕು ಕೆರೆಗಳನ್ನು ಅಭಿವೃದ್ಧಿಗೊಳಿಸಿದ್ದೇವೆ. ಇಂದಿನಿಂದ ಕೊನಘಟ್ಟ ಕೆರೆಯ ಹೂಳೆತ್ತುವ ಕಾಮಗಾರಿ ಆರಂಭವಾಗಿದೆ. ₹ 24 ಲಕ್ಷ ವೆಚ್ಚವನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಭರಿಸಲಿದೆ. ಕೆರೆಯಿಂದ ತೆಗೆಯುವ ಹೂಳನ್ನು ರೈತರಿಗೆ ಉಚಿತವಾಗಿ ನೀಡಲಾಗುತ್ತದೆ’ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪ ವಿಭಾಗಾಧಿಕಾರಿ ಸಿ.ಮಂಜುನಾಥ್, ಕೊನಘಟ್ಟ ಗ್ರಾಮ ಮಾರ್ಗದಾಂಬಾ ದೇವಿ ಅಮ್ಮನ ಕೆರೆ ಬಳಕೆದಾರರ ಸಂಘದ ಅಧ್ಯಕ್ಷ ವೆಂಕಟರಮಣಶೆಟ್ಟಿ, ಉಪಾಧ್ಯಕ್ಷ ನಾರಾಯಣಗೌಡ, ಕಾರ್ಯದರ್ಶಿ ಜಿ.ಆಂಜಿನಪ್ಪ, ಉಪ ಕಾರ್ಯದರ್ಶಿ ವಿಶ್ವೇಶ್ವರಯ್ಯ, ಸಂಘಟನಾ ಕಾರ್ಯದರ್ಶಿ ಅಶ್ವಥನಾರಾಯಣ, ಖಜಾಂಚಿ ಅಶೋಕ, ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಮ್ಮ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯ ಬಸವರಾಜಯ್ಯ, ರಮೇಸ್, ಶಶಿಕಲಾ,ಮುಖಂಡರಾದ ಮಂಜುನಾಥಸ್ವಾಮಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.