ADVERTISEMENT

‘ನ್ಯಾಯಾಂಗ ವ್ಯವಸ್ಥೆ ಚುರುಕಿಗೆ ಒಡನಾಟ ಮುಖ್ಯ’

ವರ್ಗಾವಣೆಗೊಂಡ ಅಧಿಕಾರ ಸ್ವೀಕರಿಸಿದ ನ್ಯಾಯಾಧೀಶರ ಸ್ವಾಗತ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 27 ಮೇ 2019, 13:18 IST
Last Updated 27 ಮೇ 2019, 13:18 IST
ನ್ಯಾಯಾಧೀಶರನ್ನು ವಕೀಲರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು
ನ್ಯಾಯಾಧೀಶರನ್ನು ವಕೀಲರ ಸಂಘದ ಪದಾಧಿಕಾರಿಗಳು ಅಭಿನಂದಿಸಿದರು   

ದೇವನಹಳ್ಳಿ: ನ್ಯಾಯಾಧೀಶರ ಮತ್ತು ವಕೀಲರ ನಡುವೆ ಉತ್ತಮ ಒಡನಾಟವಿದ್ದರೆ ಮಾತ್ರ ನ್ಯಾಯಾಂಗ ವ್ಯವಸ್ಥೆಯಲ್ಲಿ ಚುರುಕಿನಿಂದ ಕೆಲಸ ಮಾಡಲು ಸಾಧ್ಯವಿದೆ ಎಂದು ಸಿವಿಲ್ ನ್ಯಾಯಾಧೀಶ ದಿಲೀಪ್ ಕುಮಾರ್ ಹೇಳಿದರು.

ಇಲ್ಲಿನ ತಾಲ್ಲೂಕು ವಕೀಲರ ಸಂಘದ ಕಚೇರಿ ಸಭಾಂಗಣದಲ್ಲಿ ಬೇರೆಡೆಯಿಂದ ವರ್ಗಾವಣೆಯಾಗಿ ಅಧಿಕಾರ ವಹಿಸಿಕೊಂಡ ನ್ಯಾಯಾಧೀಶರ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಬೇಸಿಗೆಯ ರಜೆಯ ನಂತರ ಆರಂಭಗೊಂಡಿರುವ ನ್ಯಾಯಾಲಯದ ಕಲಾಪ ವಕೀಲರಿಗೆ ಮತ್ತು ನ್ಯಾಯಾಧೀಶರಿಗೆ ಹೊಸ ವರ್ಷದ ಸಂಭ್ರಮಾಚರಣೆ ಇದ್ದಂತೆ. ನ್ಯಾಯಾಲಯದ ಕಲಾಪಗಳು ಮತ್ತು ವಕೀಲರ ನಡೆ ನುಡಿಯನ್ನು ಕಕ್ಷಿದಾರರಲ್ಲದೆ ಸಾರ್ವಜನಿಕರು ಗಮನಿಸುತ್ತಿರುತ್ತಾರೆ. ಇದೊಂದು ಮಾದರಿ ವಕೀಲರ ಸಂಘ ಎಂಬುದನ್ನು ಕೇಳಿದ್ದೇನೆ’ ಎಂದರು.

ADVERTISEMENT

5ನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧಿಶ ಎ.ಹರೀಶ್ ಮಾತನಾಡಿ, ‘ನಾನು ಹದಿಮೂರು ವರ್ಷಗಳಿಂದ ಬೆಂಗಳೂರು ವಕೀಲರ ಸಂಘದಲ್ಲಿ ಸದಸ್ಯನಾಗಿ ಸಕ್ರಿಯನಾಗಿದ್ದೆ. ನ್ಯಾಯಾಂಗ ವ್ಯವಸ್ಥೆಯ ಒಂದೊಂದು ಭಾಗವನ್ನು ಚೆನ್ನಾಗಿ ಅರಿತಿದ್ದೇನೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಭೇದ, ಭಾವ, ಜಾತಿ ಮತ ಧರ್ಮವಿಲ್ಲದೆ ಕರ್ತವ್ಯ ನಿರ್ವಹಿಸಿ ಕಕ್ಷಿದಾರರಿಗೆ ನ್ಯಾಯ ಕೊಡಿಸುವ ಗುರುತರ ಜವಾಬ್ದಾರಿ ವಕೀಲ ಮಿತ್ರರ ಮೇಲಿದೆ’ ಎಂದು ಹೇಳಿದರು.

ಪ್ರಧಾನ ಸಿವಿಲ್ ನ್ಯಾಯಾಧೀಶ ಸಂದೇಶ ಕುಮಾರ್ ಮತ್ತು ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಯೋಗೇಶ್ವರಿ ಮಾತನಾಡಿ, ನ್ಯಾಯಾಲಯದ ಪ್ರಕ್ರಿಯೆಯಲ್ಲಿ ವಕೀಲರ ಪಾತ್ರ ಅತ್ಯಂತ ಮಹತ್ವದ್ದು. ಒಂದು ತಂಡವಾಗಿ ಕೆಲಸ ಮಾಡಿದಾಗ ಪ್ರಕರಣಗಳು ತ್ವರಿತವಾಗಿ ಇತ್ಯರ್ಥಗೊಳ್ಳಲು ಸಾಧ್ಯವಿದೆ ಎಂದು ಹೇಳಿದರು.

4ನೇ ಹೆಚ್ಚುವರಿ ನ್ಯಾಯಾಧೀಶ ಪ್ರಸಾದ್, ಹಿರಿಯ ಸಿವಿಲ್ ನ್ಯಾಯಾಧೀಶ ಸಂಜಯ್, ರಾಜ್ಯ ವಕೀಲರ ಪರಿಷತ್ ನಿರ್ದೇಶಕ ಹರೀಶ್, ವಕೀಲರ ಸಂಘ ತಾಲ್ಲೂಕು ಘಟಕ ಉಪಾಧ್ಯಕ್ಷ ಜಯರಾಮ್, ಕಾರ್ಯದರ್ಶಿ ಆನಂದ್ ಕುಮಾರ್, ಖಜಾಂಚಿ ವೆಂಕಟೇಶ್, ಹಿರಿಯ ವಕೀಲರಾದ ಭೈರೇಗೌಡ, ಕಾರ್ಯಕಾರಿ ಮಂಡಳಿ ಸದಸ್ಯರಾದ ಬಿ.ಎಂ. ವೀರಪ್ಪ, ಸಿ.ಆರ್. ದೇವರಾಜು, ಡಿ.ಎಂ.ಮುನಿಯಪ್ಪ, ಬಿ.ಎ. ದೇವರಾಜ್, ಎನ್.ಕೃಷ್ಣ, ವಿ. ಶಂಕರಪ್ಪ, ಆರ್ ಪ್ರಭಾಕರ್, ಆರ್.ದೇವೇಗೌಡ, ನರೇಂದ್ರ ಬಾಬು ,ನಾಗೇಶ್, ವೆಂಟೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.