ದೇವನಹಳ್ಳಿ: ‘ಕನ್ನಡ ಭಾಷೆಯ ಉಳಿವಿನ ಬಗ್ಗೆ ಉಪದೇಶ ಮಾಡುವವರು ಹೆಚ್ಚು ಆತ್ಮಾಭಿಮಾನದಿಂದ ಕೆಲಸ ಮಾಡುವವರು ಕಡಿಮೆ’ ಎಂದು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎನ್ ಸಂಶಿ ಹೇಳಿದರು.
ಇಲ್ಲಿನ ವಕೀಲರ ಭವನದಲ್ಲಿ ನಡೆದ ವಕೀಲರ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡ ಮಾಧ್ಯಮ ಶಾಲೆಗಳು ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿದ್ದರೂ ವಾರ್ಷಿಕವಾಗಿ ಕಡಿಮೆಯಾಗುತ್ತಿವೆ. ಯಾರ ಬಳಿ ಹೆಚ್ಚು ಹಣವಿದೆ ಅವರು ಶಾಲೆ ಕಾಲೇಜು ಆರಂಭಿಸುತ್ತಾರೆ, ಶಿಕ್ಷಣ ವ್ಯಾಪಾರೀಕರಣವಾಗುತ್ತಿದೆ. ಮಾತೃಭಾಷೆಯಿಂದಲೂ ಜ್ಞಾನಾರ್ಜನೆ ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಎಲ್ಲ ಕ್ಷೇತ್ರಗಳಲ್ಲಿನ ಸಾಧಕರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗುತ್ತಿದೆ ಆದರೆ ವಕೀಲರ ಸೇವೆಯನ್ನು ಗುರುತಿಸುವುದಿಲ್ಲ. ಅವರು ಕಾನೂನು ವಿಷಯಗಳ ಬಗ್ಗೆ ಹೆಚ್ಚು ಅಧ್ಯಯನ ಶೀಲರಾಗಬೇಕು ಎಂದರು.
ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕನ್ನಡ ಪ್ರಾಧ್ಯಾಪಕ ಡಾ. ರವಿಕುಮಾರ್ ಮಾತನಾಡಿ, ವಿಶ್ವದಲ್ಲಿ ಕನ್ನಡ ಪ್ರಾಚೀನ ಭಾಷೆಯಲ್ಲಿ 3ನೇ ಸ್ಥಾನದಲ್ಲಿದೆ, ಕನ್ನಡ ಅನ್ನದ ಭಾಷೆಯಾದರೆ ಮಾತ್ರ ಉಳಿಗಾಲ ಎಂದರು.
ರಾಮಯ್ಯ ಆಸ್ಪತ್ರೆ ಆಡಳಿತಾಧಿಕಾರಿ ಡಾ. ಅರುಣ್ ಮಾವಾಜಿ, ಹಿರಿಯ ಸಿವಿಲ್ ನ್ಯಾಯಾಧೀಶ ದಿನೇಶ್ ಹೆಗಡೆ, ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಅಬ್ದುಲ್ ಸಲೀಂ, ವಕೀಲರ ಸಂಘದ ಅಧ್ಯಕ್ಷ ಬಿ.ಎಂ. ಭೈರೇಗೌಡ, ಉಪಾಧ್ಯಕ್ಷ ಗೋವಿಂದಸ್ವಾಮಿ, ಕಾರ್ಯದರ್ಶಿ ಡಿ.ಎಸ್. ಪ್ರಭಾಕರ್, ಖಜಾಂಚಿ ಎಂ. ಶ್ರೀನಿವಾಸ್, ಸಂಘದ ಸದಸ್ಯರಾದ ಗೀತಾ ರಾಣಿ, ರಾಜಣ್ಣ, ಮುನೇಗೌಡ, ಲೋಕೇಶ್ ದ್ಯಾವಪ್ಪ, ಸುನೀಲ್, ಮೋಹನ್, ಮಹೇಂದ್ರ ಕುಮಾರ್, ಆರ್.ವಿ. ಲೋಕೇಶ್, ಎಂ. ಉಮೇಶ್, ವಿಶ್ವನಾಥ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.