ದೇವನಹಳ್ಳಿ: ಎಸಿಐನ ಎಎಸ್ಕ್ಯೂ ಅರೈವಲ್ ಸರ್ವೇ ಗ್ಲೋಬಲ್-2022 ಹಾಗೂ ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ ವರ್ಲ್ಡ್ (ಎಸಿಐ)ನಿಂದ ಕೊಡಮಾಡುವ ‘ಅತ್ಯುತ್ತಮ ವಿಮಾನ ನಿಲ್ದಾಣ’ ಪ್ರಶಸ್ತಿಗೆ ಇಲ್ಲಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪಾತ್ರವಾಗಿದೆ.
ಈ ಗೌರವವು ವಿಮಾನ ನಿಲ್ದಾಣಕ್ಕೆ ಮತ್ತೊಂದು ಗರಿ ತಂದುಕೊಟ್ಟಿದ್ದು, ಆ ಮೂಲಕ ಗ್ರಾಹಕ ಕೇಂದ್ರಿತ ವಿಮಾನ ನಿಲ್ದಾಣವಾಗಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ.
ಭಾರತದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣಗಳಲ್ಲಿ ಒಂದಾಗಿರುವ ಬೆಂಗಳೂರು ವಿಮಾನ ನಿಲ್ದಾಣವು ಮೆಟ್ರೊ ಅಲ್ಲದ ನಗರಗಳಿಗೆ ಸಂಪರ್ಕವನ್ನು ಸುಲಭಗೊಳಿಸುವ ಮೂಲಕ ಮತ್ತು ದಕ್ಷಿಣ ಭಾರತಕ್ಕೆ ಆದ್ಯತೆಯ ವರ್ಗಾವಣೆ ಕೇಂದ್ರವಾಗಿ ಸೇವೆ ಸಲ್ಲಿಸುವ ಮೂಲಕ ಭಾರತದ ವಾಯುಯಾನ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡುತ್ತಿದೆ.
ಸಮರ್ಥ ಡಿಬೋರ್ಡಿಂಗ್ ಕಾರ್ಯ ವಿಧಾನ, ಸುವ್ಯವಸ್ಥಿತ ವಲಸೆ ಮತ್ತು ಕಸ್ಟಮ್ಸ್ ಪ್ರಕ್ರಿಯೆಗಳು, ಸಂಘಟಿತ ಬ್ಯಾಗೇಜ್ ಕ್ಲೈಮ್ ಸೇವೆ ಮತ್ತು ಸಾರಿಗೆ, ಹೋಟೆಲ್ಗಳು ಮತ್ತು ಎಐ- ಚಾಲಿತ ಸಹಾಯ ರೋಬೊಟ್ಗಳಂತಹ ಮೂಲ ಸೌಕರ್ಯದ ಲಭ್ಯತೆ ಸೇರಿದಂತೆ ಹಲವು ರೀತಿಯ ಸೌಲಭ್ಯವನ್ನು ವಿಮಾನ ನಿಲ್ದಾಣದಲ್ಲಿ ಒದಗಿಸಲಾಗಿದೆ. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಹತ್ತಿರವಾಗಿದೆ.
ಉತ್ತಮ ಗ್ರಾಹಕರ ಅನುಭವ ನೀಡಲು ಮತ್ತು ಹೆಚ್ಚುತ್ತಿರುವ ಪ್ರಯಾಣಿಕರ ಪ್ರಮಾಣವನ್ನು ನಿರ್ವಹಿಸಲು ಕಾರ್ಯಾಚರಣೆಯ ದಕ್ಷತೆ ಸುಧಾರಿಸುವ ದೃಷ್ಟಿಯೊಂದಿಗೆ ವಿಮಾನ ನಿಲ್ದಾಣವು ಭಾರತಕ್ಕೆ ಹೊಸ ಗೇಟ್ ವೇ ಆಗುವ ಗುರಿ ಹೊಂದಿದೆ.
‘ಅತ್ಯುತ್ತಮ ವಿಮಾನ ನಿಲ್ದಾಣ ಎಂಬ ಪ್ರಶಸ್ತಿ ಸ್ವೀಕರಿಸಲು ಸಂತಸವಾಗುತ್ತಿದೆ. ಈ ಮನ್ನಣೆಯು ನಮ್ಮ ತಂಡದ ಕಠಿಣ ಪರಿಶ್ರಮ, ಸಮರ್ಪಣೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ. ಈ ಸಾಧನೆಗೆ ಕಾರಣರಾದ ಪ್ರಯಾಣಿಕರಿಗೂ ಅಭಿ ನಂದನೆ ಸಲ್ಲಿಸುತ್ತೇನೆ’ ಎಂದು ವಿಮಾನ ನಿಲ್ದಾಣದ ಎಂ.ಡಿ ಮತ್ತು ಸಿಇಒ ಶ್ರೀಹರಿ ಮರಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.