ADVERTISEMENT

ಕೋಡಿಮಂಚೇನಹಳ್ಳಿಯಲ್ಲಿ ಗೋಮಾಳವೇ ಮಾಯ!

ಜಮೀನು ಮಂಜೂರಾತಿಗೆ ಪ್ರಧಾನಿ, ಮುಖ್ಯಮಂತ್ರಿ ಪತ್ರ, ಸೂಕ್ತ ಸ್ಪಂದನೆ ಇಲ್ಲ: ಎಸ್‌.ಬಿ.ಉಮೇಶ್‌

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 19:30 IST
Last Updated 29 ಡಿಸೆಂಬರ್ 2019, 19:30 IST
ಶ್ರೀ ಗೋಕುಲ ಸೇವಾ ಸಮಿತಿ ಅಧ್ಯಕ್ಷ ಎಸ್‌.ಬಿ.ಉಮೇಶ್‌ ವರ ಗೋಶಾಲೆ
ಶ್ರೀ ಗೋಕುಲ ಸೇವಾ ಸಮಿತಿ ಅಧ್ಯಕ್ಷ ಎಸ್‌.ಬಿ.ಉಮೇಶ್‌ ವರ ಗೋಶಾಲೆ   

ದೇವನಹಳ್ಳಿ: ನಗರದ ಕಸಬಾ ಹೋಬಳಿ ಕೋಡಿಮಂಚೇನಹಳ್ಳಿ ಗ್ರಾಮದ ಸರ್ವೇ ನಂಬರ್ 5ರಲ್ಲಿರುವ ಸರ್ಕಾರಿ ಗೋಮಾಳ 38.13 ಎಕರೆ ಪೈಕಿ ಉಳಿಕೆ 17.11 ಎಕರೆ ಜಾಗ ಎಲ್ಲಿದೆ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ನಡೆಯುತ್ತಿದೆ.

‘ಸರ್ಕಾರಿ ಖರಾಬು ಒಟ್ಟು 38.13 ಎಕರೆ ವಿಸ್ತೀರ್ಣದಲ್ಲಿ 7.20 ಎಕರೆಯಲ್ಲಿ ಪೊಲೀಸ್‌ ಸಿಬ್ಬಂದಿಗೆ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗಿದೆ. 9 ಸ್ವಾಧೀನದಾರರಿಗೆ 21.02 ಎಕರೆ ನೀಡಲಾಗಿದೆ. 2019ರ ಕಂದಾಯ ಇಲಾಖೆಯಲ್ಲಿ ಪಹಣಿಯಲ್ಲಿ ದಾಖಲಾಗಿರುವಂತೆ ಇನ್ನು 17.11 ಎಕರೆ ಜಾಗ ಇರಬೇಕು’ ಎಂಬುದು ಸ್ಥಳಿಯರ ಆರೋಪ.

ಈ ಕುರಿತು ಕೋಡಿ ಮಂಚೇನಹಳ್ಳಿ ಬಡಾವಣೆ ನಿವಾಸಿ ಶ್ರೀ ಗೋಕುಲ ಸೇವಾ ಸಮಿತಿ ಅಧ್ಯಕ್ಷ ಎಸ್‌.ಬಿ.ಉಮೇಶ್‌ ಮಾಹಿತಿ ನೀಡಿ, ‘ಕಳೆದ ಮೂರು ವರ್ಷಗಳಿಂದ ಟ್ರಸ್ಟ್‌ ಆರಂಭಿಸಿ ಗೋಶಾಲೆಯಲ್ಲಿ ಬಿಡಾಡಿ ಹಸುಗಳ ಜೊತೆಗೆ 18 ನಾಟಿ ಹಸುಗಳನ್ನು ಖರೀದಿಸಿ ಸಾಕಾಣಿಕೆ ಮಾಡುತ್ತಿದ್ದೇನೆ. ಈಗ ಹಸು ಮತ್ತು ಕರುಗಳು ಸೇರಿ ಒಟ್ಟು 102 ಇವೆ. ಅವುಗಳ ಸಾಕಾಣಿಕೆ ಸಾಕಾಣಿಕೆ ಮಾಡಲು ಜಾಗದ ಕೊರತೆ ಇರುವುದರಿಂದ ಸ್ಥಳೀಯ ಸಂಸದರಿಗೆ 2019 ಆ. 2ರಂದು ಪತ್ರ ಬರೆದು ಮನವಿ ಮಾಡಿದ್ದೆ. ಅಂದೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮೂಲಕ ಮನವಿ ಮಾಡಿದಾಗ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ನನಗೂ ಒಂದು ಪ್ರತಿ ಕಳುಹಿಸಿದ್ದಾರೆ’ ಎಂದು ತಿಳಿಸಿದರು.

ADVERTISEMENT

‘ರಾಜ್ಯ ಸರ್ಕಾರದ ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ 2019 ಆ. 12ರಂದು ಗ್ರಾಮಾಂತರ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿಯವರ ಸೂಚನೆಯಂತೆ ಸಂಸದರ ಮನವಿ ಹಾಗೂ ಅಡಕಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದರು. ಆದರೆ ಇದರ ಬಗ್ಗೆ ಈ ಹಿಂದಿನ ತಹಶೀಲ್ದಾರ್‌ 2019 ಆ. 26ರಂದು ಗ್ರಾಮ ಲೆಕ್ಕಿಗ ಮತ್ತು ರಾಜಸ್ವ ನಿರೀಕ್ಷಕರು ನೀಡಿರುವ ವರದಿ ಮತ್ತು ಕಂದಾಯ ಇಲಾಖೆಯ ದಾಖಲೆಗೆ ತಾಳೆಯಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಕಂದಾಯ ಇಲಾಖೆಯಲ್ಲಿನ ದಾಖಲಾತಿ ಅನ್ವಯ 5 ಎಕರೆ ಜಮೀನು ಮಂಜೂರು ಮಾಡುವಂತೆ ಮನವಿ ಮಾಡಿದ್ದೆ. ವರದಿ ಅನ್ವಯ ಸರ್ವೇ ನಂಬರ್‌ 5ರಲ್ಲಿ ಒಟ್ಟು ವಿಸ್ತೀರ್ಣ 39.19 ಎಕರೆ ಇದ್ದು ಮಂಜೂರಾತಿ ವಿಸ್ತೀರ್ಣ 38 ಎಕರೆ ಆಗಿದೆ. ಸದರಿ ವಿಸ್ತೀರ್ಣದಲ್ಲಿ ಸರ್ಕಾರಿ ರಸ್ತೆ ಇದೆ. ಉಳಿಕೆ 1.19 ಎಕರೆ ವಿಸ್ತೀರ್ಣದಲ್ಲಿ 27 ಗುಂಟೆ ಸರ್ಕಾರಿ ಸ್ಮಶಾನಕ್ಕೆ, 10 ಗುಂಟೆ ಅಬಕಾರಿ ಇಲಾಖೆಗೆ, 10 ಗುಂಟೆ ಮೀನುಗಾರಿಕೆ ಇಲಾಖೆಗೆ, 10 ಗುಂಟೆ ಗ್ರಾಮ ಲೆಕ್ಕಿಗರ ಕಚೇರಿ ಹಾಗೂ ವಸತಿ ಗೃಹಕ್ಕೆಂದು 10 ಗುಂಟೆ ಮಂಜೂರಾತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿಕೆ ಇರುವುದಿಲ್ಲ ಎಂದು ನೀಡಿದ್ದಾರೆ’ ಎಂಂದು ತಿಳಿಸಿದರು.

‘ನಾವು ಕೇಳಿದ್ದು 5 ಎಕರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಗಳ ಪತ್ರಕ್ಕೂ ಬೆಲೆ ಇಲ್ಲ. ಸ್ಥಳ ಪರಿಶೀಲನೆ ನಡೆಸದೆ ಎಲ್ಲೋ ಕುಳಿತು ವರದಿ ಬರೆದು ಪರಿಶೀಲಿಸಲಾಗಿದೆ ಎಂದು ಕಳುಹಿಸಿದರೆ ಹೇಗೆ. ಕನಿಷ್ಠ 20 ಗುಂಟೆ ಟ್ರಸ್ಟ್‌ಗೆ ನೀಡಿ ಸರ್ಕಾರದ ಅಧೀನದಲ್ಲೇ ಸೂಕ್ತ ಕಡ್ಡಾಯ, ನಿಯಮಗಳನುಸಾರ ಯಾಕೆ ನೀಡಬಾರದು. ಪಾರಿವಾಳ ಗುಡ್ಡದಲ್ಲಿ 30ಕ್ಕೂ ಹೆಚ್ಚು ಎಕರೆ ಖಾಸಗಿ ಟ್ರಸ್ಟ್‌ಗೆ ಕೊಟ್ಟಿದ್ದಾರೆ. ಇನ್ನು ನಾಲ್ಕಾರು ಎಕರೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಅವರಿಗೆ ಯಾವ ಮಾನದಂಡ ಆಧರಿಸಿ ನೀಡುತ್ತಾರೆ ಮತ್ತು ನೀಡಲಾಗಿದೆ ಅದೇ ರೀತಿ ನಮಗೂ ಯಾಕೆ ನೀಡಬಾರದು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.