ADVERTISEMENT

ಚಂದಾಪುರ ಪುರಸಭೆ ಅಧ್ಯಕ್ಷರಾಗಿ ಕೃಷ್ಣಾರೆಡ್ಡಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 2:03 IST
Last Updated 5 ನವೆಂಬರ್ 2020, 2:03 IST
ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕೃಷ್ಣಾರೆಡ್ಡಿ ಮತ್ತು ಶ್ರೀನಿವಾಸ್ ಅವರನ್ನು ಮುಖಂಡರು ಅಭಿನಂದಿಸಿದರು
ಆನೇಕಲ್ ತಾಲ್ಲೂಕಿನ ಚಂದಾಪುರ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದ ಕೃಷ್ಣಾರೆಡ್ಡಿ ಮತ್ತು ಶ್ರೀನಿವಾಸ್ ಅವರನ್ನು ಮುಖಂಡರು ಅಭಿನಂದಿಸಿದರು   

ಆನೇಕಲ್: ತಾಲ್ಲೂಕಿನ ಚಂದಾಪುರ ಪುರಸಭೆಯ ಅಧ್ಯಕ್ಷರಾಗಿ ಬಿಜೆಪಿಯ ಕೃಷ್ಣಾರೆಡ್ಡಿ ಮತ್ತು ಉಪಾಧ್ಯಕ್ಷರಾಗಿ ಶ್ರೀನಿವಾಸ್‌ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಬುಧವಾರ ನಿಗದಿಯಾಗಿದ್ದ ಚುನಾವಣೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಾರೆಡ್ಡಿ ಮತ್ತು ಶ್ರೀನಿವಾಸ್‌ ಮಾತ್ರವೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆ ನಡೆಯಿತು.

23 ಸದಸ್ಯ ಬಲದ ಪುರಸಭೆಯಲ್ಲಿ ಒಂದು ಸ್ಥಾನ ಖಾಲಿಯಿದೆ. 22 ಸ್ಥಾನಗಳ ಪೈಕಿ 16 ಬಿಜೆಪಿ ಮತ್ತು 6 ಕಾಂಗ್ರೆಸ್‌ ಸದಸ್ಯರಿದ್ದಾರೆ. ಬಿಜೆಪಿಗೆ ನಿಚ್ಚಳ ಬಹುಮತವಿದ್ದರಿಂದ ಕಮಲ ಪಾಳಯದ ಅಭ್ಯರ್ಥಿಗಳ ಅವಿರೋಧ ಆಯ್ಕೆಯಾಗಿದೆ.

ADVERTISEMENT

ನೂತನ ಅಧ್ಯಕ್ಷ ಕೃಷ್ಣಾರೆಡ್ಡಿ ಮಾತನಾಡಿ, ‘ಚಂದಾಪುರ ಪುರಸಭೆಯನ್ನು ಮಾದರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಎಲ್ಲರ ಸಹಕಾರ ಪಡೆಯಲಾಗುವುದು. ಪುರಸಭೆ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಹೆಚ್ಚಾಗಿದೆ. ಸಮಸ್ಯೆಯ ಪರಿಹಾರಕ್ಕಾಗಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಪ್ರಯತ್ನಿಸಲಾಗುವುದು. ರಸ್ತೆ ಡಾಂಬರೀಕರಣ ಸೇರಿದಂತೆ ಮೂಲಸೌಲಭ್ಯದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡಲಾಗುವುದು’ ಎಂದು ಭರವಸೆ ನೀಡಿದರು.

ಪುರಸಭೆಯ ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಚಿತ್ರದುರ್ಗದ ಸಂಸದ ಎ. ನಾರಾಯಣಸ್ವಾಮಿ ಮತ್ತು ಬಿಜೆಪಿ ಜಿಲ್ಲಾ ಅಧ್ಯಕ್ಷ ಎನ್‌.ಆರ್. ರಮೇಶ್‌ ಅಭಿನಂದಿಸಿದರು.

ಅತ್ತಿಬೆಲೆ ಮಂಡಲ ಅಧ್ಯಕ್ಷ ಎಸ್‌.ಆರ್‌.ಟಿ. ಅಶೋಕ್‌, ಮುಖಂಡರಾದ ಕೆ.ವಿ. ಶಿವಪ್ಪ, ಬಿಬಿಐ ಮುನಿರೆಡ್ಡಿ, ಮುರಳಿ, ಜಿಲ್ಲಾ ಪಂಚಾಯಿತಿ ಸದಸ್ಯ ನಾಗೇಶ್ ‌ರೆಡ್ಡಿ, ಪುರಸಭಾ ಸದಸ್ಯರಾದ ವರದರಾಜು, ರಾಮಚಂದ್ರ, ಮಂಜುಳಾ ನೀಲಕಂಠಯ್ಯ, ಸುಧಾಕರ್‌ ರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.