ಪೊಲೀಸ್ – ಪ್ರಾತಿನಿಧಿಕ ಚಿತ್ರ
ದೇವನಹಳ್ಳಿ: ಕಕ್ಷಿದಾರರ ಜಮೀನಿನಲ್ಲಿ ಅನಧಿಕೃತವಾಗಿ ಹಾಕಿದ್ದ ವಿದ್ಯುತ್ ಕಂಬಗಳ ಪರಿಶೀಲನೆ ತೆರಳಿದ್ದ ವಕೀಲ ಸಂದೀಪ್ ಮೇಲೆ ಶುಕ್ರವಾರ ಸಂಜೆ ಪಟ್ಟಣದ ಬೈಪಾಸ್ ರಸ್ತೆ ಸಮೀಪ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ.
ಚಿಂತಾಮಣಿ ಬಿಜೆಪಿ ಮುಖಂಡ, ರಿಯಲ್ ಎಸ್ಟೇಟ್ ಉದ್ಯಮಿ ಜಿ.ಎನ್.ವೇಣುಗೋಪಾಲ್ ಹಾಗೂ ಮಗ ವಿವೇಕ್ ವಿರುದ್ಧ ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಸಂದೀಪ್ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪಟ್ಟಣದ ಬೈಪಾಸ್ ರಸ್ತೆಯ ಸಮೀಪ ಹಲ್ಲೆ ನಡೆಸಲಾಗಿದ್ದು, ಕಕ್ಷಿದಾರರ ಜಮೀನಿನಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬಗಳನ್ನು ಹಾಕಿಸಿದ್ದರ ಕುರಿತು ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಶನಿವಾರ ಬೆಳಗ್ಗೆ ದೂರು ನೀಡಲಾಗಿತ್ತು.
ಕಕ್ಷಿದಾರ ಗೋಪಾಲಕೃಷ್ಣ ಎಂಬುವರ ಜಮೀನಿನಲ್ಲಿ ಅನಧಿಕೃತವಾಗಿ ವಿದ್ಯುತ್ ಕಂಬ ಹಾಕಲಾಗಿದೆ ಎಂದು ದೇವನಹಳ್ಳಿ ಟೌನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ಬೆಳಗ್ಗೆ ದೂರು ನೀಡಲಾಗಿತ್ತು. ದೇವನಹಳ್ಳಿ ಪೊಲೀಸರು ಮಧ್ಯಾಹ್ನ ಸ್ಥಳ ಪರಿಶೀಲನೆಗೆ ತೆರಳಿದ್ದರು.ಕಕ್ಷಿದಾರರಿಗೆ ಕಾನೂನು ನೆರವು ನೀಡಲು ವಕೀಲ ಸಂದೀಪ್ ಹೋಗಿದ್ದರು.
ಎರಡು ಕಾರುಗಳಲ್ಲಿ ಬಂದಿದ್ದ ವೇಣುಗೋಪಾಲ್, ಮಗ ಹಾಗೂ ಸಹಚರರು ಪೊಲೀಸರು ಸ್ಥಳ ಪರಿಶೀಲಿಸಿ ಹೊರಟು ಹೋದ ನಂತರ ಏಕಾಏಕಿ ತನ್ನ ಮೇಲೆ ಹಲ್ಲೆ ನಡೆಸಿದರು. ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿ, ದೇವನಹಳ್ಳಿಯ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆದದ್ದಾಗಿ ಸಂದೀಪ ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿಗಳ ಪರ ವಕಾಲತ್ತು ವಹಿಸದಂತೆ ದೇವನಹಳ್ಳಿ ವಕೀಲರ ಸಂಘ ತನ್ನ ಸದಸ್ಯರಿಗೆ ಸೂಚನೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.