ಆನೇಕಲ್ : ತಾಲ್ಲೂಕಿನ ಜಿಗಣಿ ಸಮೀಪದ ಕ್ಯಾಲಸನಹಳ್ಳಿ ಸಮೀಪದ ಉಪ್ಕಾರ್ ಅರ್ಬರ್ಸ್ ಬಡಾವಣೆಯಲ್ಲಿ ಭಾನುವಾರ ಬೆಳಗಿನ ಜಾವ 3ಗಂಟೆಯ ಸುಮಾರಿನಲ್ಲಿ ಚಿರತೆ ಓಡಾಡಿರುವ ದೃಶ್ಯಗಳು ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಬಡಾವಣೆಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಚಿರತೆಯ ಓಡಾಟದ ಬಗ್ಗೆ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ ನಂತರ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಚಿರತೆಯ ಮಾಹಿತಿ ಕಲೆ ಹಾಕಿದ್ದಾರೆ.
ಕ್ಯಾಲಸನಹಳ್ಳಿ ರಸ್ತೆಯ ಮೂಲಕವೇ ಜಿಗಣಿ, ಬೊಮ್ಮಸಂದ್ರ ಕೈಗಾರಿಕ ಪ್ರದೇಶಕ್ಕೆ ನೂರಾರು ಮಂದಿ ಕಾರ್ಮಿಕರು ವಿವಿಧ ಪಾಳಿಗಳಲ್ಲಿ ರಾತ್ರಿಯಿಡೀ ಓಡಾಟ ಮಾಡುತ್ತಾರೆ. ಚಿರತೆ ಕಂಡಿರುವುದರಿಂದ ಬಡಾವಣೆ ಮತ್ತು ಸುತ್ತಮುತ್ತಲ ಗ್ರಾಮಗಳ ಜನರು ಭಯಗೊಂಡಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಸಿಬ್ಬಂದಿ ಕ್ರಮ ಕೈಗೊಂಡು ಚಿರತೆಯನ್ನು ಪತ್ತೆ ಮಾಡಿ ಸೆರೆ ಹಿಡಿಯಬೇಕು ಎಂದು ಸ್ಥಳೀಯ ಅಣ್ಣಯ್ಯಪ್ಪ ಒತ್ತಾಯಿಸಿದರು.
ಅರಣ್ಯ ಇಲಾಖೆಯಿಂದ ಗಸ್ತು ಹೆಚ್ಚಿಸಲಾಗುವುದು. ಜತೆಗೆ ಸಾರ್ಜನಿಕರೂ ಎಚ್ಚರಿಕೆ ವಹಿಸಬೇಕು. ರಾತ್ರಿ ಮತ್ತು ಮುಂಜನಾನೆಯ ಸಂದರ್ಭದ ಓಡಾಟ ನಿಲ್ಲಿಸಬೇಕು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ಸಲಹೆ ನೀಡಿದರು.
ಚಿರತೆಯ ಚಲನವಲನ ಮತ್ತು ಹೆಜ್ಜೆ ಗುರುತು ಗುರುತಿಸಲಾಗಿದೆ. ಚಿರತೆ ಓಡಾಡಿರುವ ಜಾಗವನ್ನು ಪರಿಶೀಲಿಸಲಾಗಿದ್ದು, ಭಾನುವಾರ ರಾತ್ರಿ ಚಿರತೆ ಓಡಾಟ ಕಂಡು ಬಂದಲ್ಲಿ ಬೋನಿಟ್ಟು ಸೆರೆ ಹಿಡಿಯಲಾಗುವುದು ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.