ADVERTISEMENT

ಲಾಕ್‌ ಡೌನ್: ನೀರು, ಊಟದ ಸೌಲಭ್ಯ ಎಲ್ಲರಿಗೂ ತಲುಪಲಿ

ಹಲವು ಕ್ರಮಗಳ ಪರಿಶೀಲನೆ ನಡೆಸಿದ ಶಾಸಕ ನಿಸರ್ಗ ನಾರಾಯಣಸ್ವಾಮಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2020, 13:44 IST
Last Updated 7 ಏಪ್ರಿಲ್ 2020, 13:44 IST
ವಿಜಯಪುರದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಪುರಸಭಾ ಮುಖ್ಯಾಧಿಕಾರಿ ಬಿ.ಎ.ಪ್ರದೀಪ್‌ ಕುಮಾರ್  ಅವರಿಂದ ಮಾಹಿತಿ ಪಡೆದರು
ವಿಜಯಪುರದಲ್ಲಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಪುರಸಭಾ ಮುಖ್ಯಾಧಿಕಾರಿ ಬಿ.ಎ.ಪ್ರದೀಪ್‌ ಕುಮಾರ್  ಅವರಿಂದ ಮಾಹಿತಿ ಪಡೆದರು   

ವಿಜಯಪುರ: ದೇಶದಾದ್ಯಂತ ಕೋವಿಡ್-19ನಿಂದ ಲಾಕ್ ಡೌನ್ ಆಗಿರುವ ಹಿನ್ನೆಲೆಯಲ್ಲಿ ಜನರಿಗೆ ಯಾವುದೇ ಕೊರತೆ ಉಂಟಾಗದಂತೆ ಪುರಸಭೆ ಅಧಿಕಾರಿಗಳು ಮುಂಜಾಗ್ರತೆ ವಹಿಸಬೇಕು ಎಂದು ಶಾಸಕ ನಿಸರ್ಗ ನಾರಾಯಣಸ್ವಾಮಿ ಹೇಳಿದರು.

ಇಲ್ಲಿನ ಪುರಸಭೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಲಾಕ್ ಡೌನ್ ಪಾಲನೆ ಮಾಡಲು ಕೈಗೊಂಡಿರುವ ಕ್ರಮಗಳು, ಜನರಿಗೆ ನೀಡುತ್ತಿರುವ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಅವರು, ಅವಶ್ಯ ಬಂದಲ್ಲಿ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಬೇಕು. ಪಟ್ಟಣ ವ್ಯಾಪ್ತಿಯಲ್ಲಿರುವ ಎಲ್ಲ ಬಡವರು, ಅಗತ್ಯವುಳ್ಳವರಿಗೆ ಮೂರು ಅವಧಿಯಲ್ಲಿ ಉಚಿತವಾಗಿ ಊಟ ನೀಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಕಂದಾಯ ಇಲಾಖೆಯ ಮೂಲಕ ಪಡಿತರ ಚೀಟಿ ಇಲ್ಲದವರಿಗೂ ದಿನಸಿ ವಿತರಿಸಲು ಕ್ರಮಕೈಗೊಳ್ಳಲಾಗುವುದು. ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಸರ್ಕಾರದ ಸೌಲಭ್ಯ ತಲುಪಿಸಬೇಕು. ಸೋಂಕು ನಿವಾರಕ ಸಿಂಪಡಿಸಬೇಕು ಎಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪುರಸಭೆ ಮುಖ್ಯಾಧಿಕಾರಿ ಎ.ಬಿ.ಪ್ರದೀಪ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿ ಗುರ್ತಿಸಿರುವ ಕೊಳಚೆ ಪ್ರದೇಶದಲ್ಲಿನ ಬಡವರಿಗೆ ಹಾಲಿನ ಪಾಕೆಟ್‌ ಗಳನ್ನು ವಿತರಿಸಲಾಗುತ್ತಿದೆ. ಪೌರಕಾರ್ಮಿಕರಿಗೆ ಮುಖಗವಸು ವಿತರಣೆ ಮಾಡಲಾಗಿದೆ. 45 ಕ್ಯಾನ್ ಸ್ಯಾನಿಟೈಸರ್ ಬಂದಿದ್ದು, ಎಲ್ಲ ವಾರ್ಡ್‌ಗಳಲ್ಲಿ ದ್ರಾವಣ ಸಿಂಪಡಣೆಗೆ ಕ್ರಮಕೈಗೊಳ್ಳಲಾಗಿದೆ. ಅಗತ್ಯ ಇರುವ ಕಡೆ ಟ್ಯಾಂಕರ್‌ ಗಳ ಮೂಲಕವೂ ಕನಿಷ್ಠ 10 ದಿನಗಳಿಗೊಮ್ಮೆಯಾದರೂ ನೀರು ಕೊಡಲು ಕ್ರಮಕೈಗೊಳ್ಳಲಾಗುವುದು ಎಂದರು.

ADVERTISEMENT

ಜೆಡಿಎಸ್ ನಗರ ಘಟಕದ ಅಧ್ಯಕ್ಷ ಎಸ್.ಭಾಸ್ಕರ್ ಮಾತನಾಡಿ, ಇಲ್ಲಿನ ಜೆಡಿಎಸ್ ಘಟಕ ಸೇರಿದಂತೆ ಅನೇಕ ಸ್ವಯಂ ಸೇವಾ ಸಂಸ್ಥೆಗಳ ವತಿಯಿಂದ ಪಟ್ಟಣದಲ್ಲಿ ಉಚಿತ ಊಟದ ಪೊಟ್ಟಣ ವಿತರಣೆ ನಡೆಯುತ್ತಿದೆ. ಅಗತ್ಯವಿದ್ದರೂ ಇರುವ ಕಡೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಇಲ್ಲಿನ ಸತ್ಯಮ್ಮ ಕಾಲೊನಿ, ಚನ್ನಮ್ಮಬಡಾವಣೆಗೆ ಸರಿಯಾಗಿ ನೀರು ಸರಬರಾಜು ಆಗುತ್ತಿಲ್ಲ. ಹಾಲು ಸರಬರಾಜು ಮಾಡುತ್ತಿಲ್ಲ ಎಂದು ಸ್ಥಳೀಯರು ದೂರಿದರು.

ತಾಲ್ಲೂಕು ಘಟಕದ ಜೆಡಿಎಸ್ ಕಾರ್ಯದರ್ಶಿ ಜಿ.ಎ.ರವೀಂದ್ರ, ಉಪತಹಶೀಲ್ದಾರ್ ಚಿದಾನಂದ್, ಗ್ರಾಮಲೆಕ್ಕಾಧಿಕಾರಿಗಳಾದ ಸುನೀಲ್ ಬಾಳಿಗ, ಮಡಿವಾಳಪ್ಪ, ಪುರಸಭಾ ಆರೋಗ್ಯಾಧಿಕಾರಿ ಉದಯಕುಮಾರ್ ರಾವ್, ಕಿರಿಯ ಆರೋಗ್ಯ ನಿರೀಕ್ಷಕಿ ಪ್ರಭಾವತಿ, ವ್ಯವಸ್ಥಾಪಕ ಆಂಜನೇಯಲು, ಕಂದಾಯಾಧಿಕಾರಿ ಜಯಕಿರಣ್, ಮುಖಂಡರಾದ ದೇವನಹಳ್ಳಿ ನರಸಿಂಹಮೂರ್ತಿ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.