ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಲಯನ್ಸ್ ಕ್ಲಬ್ನ 2020-21ನೇ ಸಾಲಿನ ಅಧ್ಯಕ್ಷರಾಗಿ ಆರ್.ಎಸ್.ಮಂಜುನಾಥ್ ಆಯ್ಕೆಯಾಗಿದ್ದಾರೆ.
ನಗರದ ಲಯನ್ಸ್ ಕ್ಲಬ್ ವತಿಯಿಂದ ನಡೆದ 47ನೇ ಚಾರ್ಟರ್ ವಾರ್ಷಿಕೋತ್ಸವ ಹಾಗೂ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಲಯನ್ಸ್ ಜಿಲ್ಲಾ ಮಾಜಿ ಗರ್ವನರ್ ಎಚ್.ಕೆ.ಗಿರಿಧರ್ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ನೇಮಕ ಮಾಡಿ ಪ್ರಮಾಣ ವಚನ ಬೋಧಿಸಿ, ಗ್ರಾಮಾಂತರ ಪ್ರದೆಶದಲ್ಲಿ ಉತ್ತಮ ಕ್ಲಬ್ ಎಂದು ಹೆಸರು ಗಳಿಸಿರುವ ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ಇತರ ಕ್ಲಬ್ಗಳಿಗೆ ಮಾದರಿಯಾಗಿದೆ. ಪ್ರಚಾರಕ್ಕಾಗಿ ಸೇವಾ ಕಾರ್ಯಗಳನ್ನು ಮಾಡದೇ, ಅರ್ಹರು ಸೇವೆಯನ್ನು ಸ್ಮರಿಸುವ ರೀತಿಯಲ್ಲಿ ಕೆಲಸ ಮಾಡಬೇಕು. ಲಯನ್ಸ್ನ ಧ್ಯೇಯ, ಸೇವಾ ಮನೋಭಾವಗಳನ್ನು ಅರಿತು ಉತ್ತಮ ಸೇವೆ ಸಲ್ಲಿಸಬೇಕು ಎಂದು ಪದಾಧಿಕಾರಿಗಳಿಗೆ ಸಲಹೆ ನೀಡಿದರು.
ಲಯನ್ಸ್ ಕ್ಲಬ್ನ ನಿಕಟಪೂರ್ವ ಅಧ್ಯಕ್ಷ ಕೆ.ಮೋಹನ್ಕುಮಾರ್ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಅಧ್ಯಕ್ಷರಾದ ಆರ್.ಎಸ್.ಮಂಜುನಾಥ್ ಮಾತನಾಡಿ, ‘ಕೋವಿಡ್-19 ಇಡೀ ವಿಶ್ವವನ್ನೇ ಕಾಡಿಸುತ್ತಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಲಯನ್ಸ್ ಕ್ಲಬ್ನ ಸೇವೆ ಜನರಿಗೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ನಿರಂತರವಾಗಿ ನಡೆದುಕೊಂಡು ಬರುತ್ತಿರುವ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರದ ಜೊತೆಗೆ ಸಸಿಗಳನ್ನು ನೆಟ್ಟು ಪೋಷಣೆ ಮಾಡುವ ಕಡೆಗೂ ಹೆಚ್ಚಿನ ಒತ್ತು ನೀಡಲಾಗುವುದು. ಕ್ಲಬ್ ಹಾಗೂ ಲಯನ್ಸ್ ಕ್ಲಬ್ ಟ್ರಸ್ಟ್ ವತಿಯಿಂದ ನಡೆಸಲಾಗುತ್ತಿರುವ ಡಯಾಲಿಸಿಸ್ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ರಿಯಾಯಿತಿ ಚಿಕಿತ್ಸೆಗೆ ನೆರವಾಗುವ ದೃಷ್ಟಿಯಿಂದ ಒಂದು ಕೋಟಿ ರೂಪಾಯಿಗಳ ನಿಧಿ ಸಂಗ್ರಹ ಮಾಡಿ ಅದರಿಂದ ಬರುವ ಬಡ್ಡಿ ಹಣವನ್ನು ಬಡವರ ಚಿಕಿತ್ಸೆಗೆ ಬಳಸಿಕೊಳ್ಳಲು ಯೋಜನೆ ಹೊಂದಲಾಗಿದೆ. ಇದರ ಸಾಕಾರಕ್ಕಾಗಿ ಈ ಸಾಲಿಗೆ ಕ್ಲಬ್ನ ಖಜಾಂಚಿಗಳಾಗಿರುವ ಹುಲಿಕಲ್ ನಟರಾಜ್ ಅವರು ಶ್ರಮವಹಿಸಿ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಲಯನ್ಸ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಂ.ಹನುಮಂತರಾಯಪ್ಪ, ಕಾರ್ಯದರ್ಶಿ ಎಲ್.ಕೃಷ್ಣಮೂರ್ತಿ ಮುಂತಾದವರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಜವಹಾರ್ ನವೋದಯ ವಿದ್ಯಾಲಯದ ಪ್ರಾಂಶುಪಾಲ ಆರ್.ಚಕ್ರವರ್ತಿ ಅವರು ಲಯನ್ಸ್ ಕ್ಲಬ್ಗೆ ₹1 ಲಕ್ಷ ದೇಣಿಗೆ ನೀಡಿದರು.
ಲಯನ್ಸ್ ಕ್ಲಬ್ನ 2020-21ನೇ ಸಾಲಿನ ನೂತನ ಪದಾಧಿಕಾರಿಗಳಾಗಿ ಆರ್.ಎಸ್.ಮಂಜುನಾಥ್ ಅಧ್ಯಕ್ಷರು, ಎಂ.ಆರ್.ಶ್ರೀನಿವಾಸ್ ಕಾರ್ಯದರ್ಶಿ,ಹುಲಿಕಲ್ ನಟರಾಜ್ ಖಜಾಂಚಿ, ಮಂಗಳಗೌರಿ ಪರ್ವತಯ್ಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.