ADVERTISEMENT

ಏಕತೆ ಭಾವನೆ ತುಂಬಲು ಮ್ಯಾರಥಾನ್ ಸಹಕಾರಿ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2019, 14:35 IST
Last Updated 8 ನವೆಂಬರ್ 2019, 14:35 IST
ಆನೇಕಲ್ ಪಬ್ಲಿಕ್ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಶಾಲೆಯ ಅಧ್ಯಕ್ಷೆ ಸುನೀತಾ ಚಾಲನೆ ನೀಡಿದರು
ಆನೇಕಲ್ ಪಬ್ಲಿಕ್ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಶಾಲೆಯ ಅಧ್ಯಕ್ಷೆ ಸುನೀತಾ ಚಾಲನೆ ನೀಡಿದರು   

ಆನೇಕಲ್: ದೇಶದ ಅಭಿವೃದ್ಧಿಗೆ ಜಾತಿ ಪದ್ಧತಿ ಮಾರಕವಾಗಿದ್ದು ಯುವ ಸಮುದಾಯ ಹಾಗೂ ವಿದ್ಯಾರ್ಥಿಗಳು ಈ ಅನಿಷ್ಟವನ್ನು ತೊಲಗಿಸಲು ಪಣ ತೊಡಬೇಕು ಎಂದು ಆನೇಕಲ್ ಪಬ್ಲಿಕ್‌ ಶಾಲೆಯ ಅಧ್ಯಕ್ಷೆ ಸುನೀತಾ ತಿಳಿಸಿದರು.

ಅವರು ಪಟ್ಟಣದಲ್ಲಿ ಆನೇಕಲ್‌ ಪಬ್ಲಿಕ್‌ ಶಾಲೆಯ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿ ಮಾತನಾಡಿದರು.

‘ಧರ್ಮಗಳ ನಡುವೆ ಶಾಂತಿ, ಸೌಹಾರ್ದತೆ ಮೂಡಲಿ ಎಂಬ ಉದ್ದೇಶದಿಂದ ಯುವಕರಿಗೆ ಮ್ಯಾರಥಾನ್‌ ಏರ್ಪಡಿಸಲಾಗಿದೆ. ಈ ಮೂಲಕ ಜಾತಿ ವ್ಯವಸ್ಥೆಯ ನಿರ್ಮೂಲನೆ ಮಾಡಲು ಜಾಗೃತಿ ಮೂಡಿಸಲಾಗುವುದು. ಪ್ರತಿಯೊಬ್ಬರು ಸೌಹಾರ್ದದಿಂದ ಜೀವನ ನಡೆಸುವಂತಾಗಬೇಕು. ಧರ್ಮಗಳ ನಡುವೆ ಕಂದಕ ಉಂಟಾಗಿ ಸ್ನೇಹ, ಸೌಹಾರ್ದ ಕಣ್ಮರೆಯಾಗಿದೆ. ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಯುವಕರಲ್ಲಿ ತುಂಬಲು ಈ ಮ್ಯಾರಥಾನ್‌ ಸಹಕಾರಿಯಾಗಲಿದೆ’ ಎಂದರು.

ADVERTISEMENT

ವಿದ್ಯಾರ್ಥಿಗಳು ಯೋಗ, ಕ್ರೀಡೆ ಸೇರಿದಂತೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಧನಾತ್ಮಕ ಶಕ್ತಿ ಮೂಡುತ್ತದೆ. ಇದರಿಂದಾಗಿ ಉತ್ತಮ ಸಮಾಜ ನಿರ್ಮಿಸಲು ಸಾಧ್ಯವಾಗುತ್ತದೆ. 5 ಕಿ.ಮೀ. ಮ್ಯಾರಥಾನ್‌ನಲ್ಲಿ ನೂರಾರು ವಿದ್ಯಾರ್ಥಿಗಳು, ಯುವಕರು ಆಸಕ್ತಿಯಿಂದ ಪಾಲ್ಗೊಂಡಿದ್ದಾರೆ ಎಂದರು.

ಓಟದ ಪುರುಷರ ವಿಭಾಗದಲ್ಲಿ ಶಿವರಾಜ್‌ ಪ್ರಥಮ ಸ್ಥಾನ ಮತ್ತು ಸುನೀಲ್‌ ದ್ವಿತೀಯ ಸ್ಥಾನ ಗಳಿಸಿದರು. ಮಹಿಳಾ ವಿಭಾಗದಲ್ಲಿ ದ್ರುವ ಪ್ರಥಮ ಸ್ಥಾನ ಗಳಿಸಿದರು.

ಶಿಕ್ಷಕಿಯರಾದ ಗಾಯತ್ರಿ, ಶಬೀನಾ, ಲತಾ, ರಾಜಪ್ಪ, ರಾಕೇಶ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.