ಆನೇಕಲ್: ತಾಲ್ಲೂಕಿನಾದ್ಯಂತ ಮಂಗಳವಾರ ನಾಗಪಂಚಮಿಯನ್ನು ಸಡಗರ, ಸಂಭ್ರಮಗಳಿಂದ ಆಚರಿಸಲಾಯಿತು. ನಾಗರಕಲ್ಲು, ಹುತ್ತಕ್ಕೆ ಹಾಲೆರೆದು, ಪೂಜೆ ಸಲ್ಲಿಸಲಾಯಿತು.
ತಾಲ್ಲೂಕಿನ ವಿವಿಧೆಡೆ ನಾಗರಕಲ್ಲುಗಳಿಗೆ ಮಹಿಳೆಯರು ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸುಬ್ರಮಣ್ಯೇಶ್ವರ ದೇವಾಲಯಗಳಲ್ಲಿ ಭಕ್ತರ ದಂಡು ಕಂಡು ಬಂತು. ಬೆಳಗಿನ ಜಾವದಿಂದಲೇ ದೇವಾಲಯಗಳಲ್ಲಿ ಧಾರ್ಮಿಕ ಕಾರ್ಯಕ್ರಮ ಆರಂಭವಾಗಿದ್ದವು.
ಪಟ್ಟಣದ ಕಂಬದ ಗಣಪತಿ ದೇವಾಲಯದ ಆವರಣದಲ್ಲಿರುವ ನಾಗರಕಲ್ಲುಗಳಿಗೆ ಭಕ್ತರು ಹಾಲೆರೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಪಟ್ಟಣದ ಶಿವಾಜಿ ವೃತ್ತದ ನಾಗರಕಟ್ಟೆ, ಥಳೀ ರಸ್ತೆಯ ನಾಗರಕಲ್ಲು ಸೇರಿದಂತೆ ಎಲ್ಲಾ ನಾಗರ ದೇವಾಲಯಗಳಲ್ಲಿ ಪೂಜೆ ನಡೆದವು.
ತಾಲ್ಲೂಕಿನ ಹಾರಗದ್ದೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯನಹಳ್ಳಿ ನಾಗರ ದೇವಾಲಯದಲ್ಲಿ ನಾಗರ ಪಂಚಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ತಾಲ್ಲೂಕಿನ ಗೇಶ್ವರ ಕ್ಷೇತ್ರ ಎಂದೇ ಹೆಸರಾಗಿರುವ ಕಿತ್ತಗಾನಹಳ್ಳಿಯ ನಾಗೇಶ್ವರ ದೇವಾಲಯದಲ್ಲಿ ಮಹಿಳೆಯರು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಾಲೆರೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಶ್ರೀವಲ್ಲಿ ಸಮೇತ ಸುಬ್ರಮಣ್ಯ ದೇವಾಲಯ, ಹೆನ್ನಾಗರದ ನಾಗಲಿಂಗೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು. ಪಟ್ಟಣದ ಬರಗೂರು ಪೇಟೆಯ ಶ್ರೀವಲ್ಲಿ ಸಮೇತ ಸುಬ್ರಮಣ್ಯ ದೇವಾಲಯದಲ್ಲಿ ಬೆಳಗಿನಿಂದಲೂ ವಿಶೇಷ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬೆಲ್ಲದಾರತಿ ಸಲ್ಲಿಸಿ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.