ವಿಜಯಪುರ (ಬೆಂ.ಗ್ರಾಮಾಂತರ):ಮದುವೆಯಾಗಲು ನಿರಾಕರಿಸಿದ್ದ ನವ ವಿವಾಹಿತೆಯನ್ನು ಪ್ರಿಯಕರ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ದೇವನಹಳ್ಳಿ ತಾಲ್ಲೂಕಿನ ಆವತಿ ಗ್ರಾಮದಲ್ಲಿ ನಡೆದಿದೆ.
ಸೌಮ್ಯ (23) ಕೊಲೆಯಾದವರು. ದೊಡ್ಡಬಳ್ಳಾಪುರ ತಾಲ್ಲೂಕಿನ ನಾಗಶೆಟ್ಟಿಹಳ್ಳಿಯ ಸುಬ್ರಮಣಿ ಎಂಬಾತ ಈ ಕೃತ್ಯ ಎಸಗಿದ ಬಳಿಕವಿಷ ಸೇವಿಸಿದ್ದು ಖಾಸಗಿ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಸೌಮ್ಯ ಮತ್ತು ಸುಬ್ರಮಣಿ ಬೆಂಗಳೂರಿನ ನಾಗವಾರದ ಕಾಫಿ ಡೇನಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದರು. ಇಬ್ಬರ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಈ ಹಿನ್ನೆಲೆಯಲ್ಲಿ ತನ್ನನ್ನು ಮದುವೆಯಾಗುವಂತೆ ಆತ ಕೇಳಿದ್ದ. ಇಬ್ಬರ ಜಾತಿ ಬೇರೆಯಾಗಿದ್ದ ಕಾರಣ ಆಕೆ ಮದುವೆಗೆ ಒಪ್ಪಿರಲಿಲ್ಲ.
ಈ ನಡುವೆಯೇ ಸೌಮ್ಯ ಕುಟುಂಬದವರು ಸೆ. 1ರಂದು ಆಕೆಯನ್ನು ಬೆಂಗಳೂರಿನ ಕಲ್ಕರೆಯ ಯುವಕನೊಂದಿಗೆ ಧರ್ಮಸ್ಥಳದಲ್ಲಿ ಮದುವೆ ಮಾಡಿಕೊಟ್ಟಿದ್ದರು. ಗುರುವಾರ ತನ್ನ ಗಂಡನೊಂದಿಗೆ ತಂದೆ ಮನೆಗೆ ಆಕೆ ಬಂದಿದ್ದರು. ರಾತ್ರಿ ಸೌಮ್ಯ ಅವರ ಮನೆಗೆ ಬಂದಿದ್ದ ಆರೋಪಿಯು ಆಕೆಯೊಂದಿಗೆ ಸ್ವಲ್ಪ ಮಾತನಾಡಬೇಕು ಎಂದು ಬಚ್ಚಲು ಮನೆಗೆ ಕರೆದುಕೊಂಡು ಹೋಗಿ ಗಲಾಟೆ ಮಾಡಿದ್ದಾನೆ. ಬಳಿಕ ಚಾಕುವಿನಿಂದ ಆಕೆಯ ದೇಹದ ಹಲವೆಡೆ ಇರಿದು ಕೊಲೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಿರುಚಾಟ ಕೇಳಿಸಿಕೊಂಡ ಮನೆಯವರು ಬಚ್ಚಲು ಮನೆಯ ಬಾಗಿಲನ್ನು ಮುರಿದು ಒಳಗೆ ಹೋಗಿ ನೋಡಿದಾಗ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸುಬ್ರಮಣಿ ಹಿಂದಿನ ಬಾಗಿಲಿನಿಂದ ಓಡಿ ಹೋಗಿ ತಪ್ಪಿಸಿಕೊಂಡಿದ್ದಾನೆ. ಸೌಮ್ಯ ಅವರನ್ನು ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಶಿರಡಿಸಾಯಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.