ದೇವನಹಳ್ಳಿ: ‘ಯಾವುದೇ ಮನರಂಜನಾ ಕ್ರೀಡೆಗಳಲ್ಲಿ ಭಾಗವಹಿಸುವಿಕೆ ಮುಖ್ಯ’ ಎಂದು ಸಮಾಜಸೇವಕ ಎಸ್.ಆರ್.ಮುನಿರಾಜು ಹೇಳಿದರು.
ಇಲ್ಲಿನ ಸರ್ಕಾರಿ ಕಿರಿಯ ಕಾಲೇಜು ಮೈದಾನದಲ್ಲಿ ಜೇಸಿಐ ಸಂಸ್ಥೆಯಿಂದ ಏರ್ಪಡಿಸಿದ್ದ ವಾರ್ಷಿಕ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಗ್ರಾಮೀಣ ಸೊಗಡಿನ ಯಾವುದೇ ಆಟಗಳು ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಅನುಕೂಲಕರವಾಗಿವೆ.
‘ಗಾಳಿಪಟ, ಚಿನ್ನದಾಂಡು, ಗೋಲಿಯಾಟ, ಬುಗರಿ, ಕಬಡ್ಡಿ, ಕೊಕ್ಕೊ ಇಂತಹ ಕ್ರೀಡಾಚಟುವಟಿಕೆಗಳಿಗೆ ಹಣದ ವೆಚ್ಚ ತೀರಾ ಕಡಿಮೆಯಾದರೂ ಆಟಗಳಲ್ಲಿನ ರೋಚಕತೆ, ನೈಪುಣ್ಯತೆ ಕ್ರೀಡಾಸಕ್ತರಿಗೆ ಉತ್ತಮ ಮನೋರಂಜನೆಯನ್ನು ಒದಗಿಸುತ್ತದೆ. ಗ್ರಾಮೀಣ ಆಟಗಳು ನಶಿಸಿ ಹೋಗದಂತೆ ತಡೆಯಲು ವೇದಿಕೆಗಳ ಜೊತೆಗೆ ಯುವಕರಲ್ಲಿ ಅರಿವು ಮೂಡಿಸಬೇಕಾಗಿದೆ’ ಎಂದು ಹೇಳಿದರು.
‘ಮಕ್ಕಳು ಪ್ರತಿಯೊಂದು ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪೋಷಕರು ಪ್ರೇರೇಪಿಸಬೇಕು. ನಿರಂತರ ಕಲಿಕೆಯ ನಂತರ ಯಾವುದಾದರೂ ಒಂದು ಆಟದಲ್ಲಿ ಆಸಕ್ತಿ ಹೆಚ್ಚಿಸಿಕೊಂಡಾಗ ಬೆನ್ನು ತಟ್ಟಿ ಪ್ರೋತ್ಸಾಹ ನೀಡುವ ಕೆಲಸ ಪೋಷಕರು ಮಾಡಬೇಕು. ತರಬೇತಿ ಜೊತೆಗೆ ನಿರಂತರ ಅಭ್ಯಾಸ ಅತಿ ಮುಖ್ಯ, ಗ್ರಾಮೀಣ ಆಟಗಳು ಕಣ್ಮರೆಯಾಗುವ ಮೊದಲು ಪ್ರಾಯೋಜಕರು ಮುಂದೆ ಬಂದು ಅವಕಾಶ ನೀಡಿ ಬೆಳೆಸಿ ಉಳಿಸುವ ಕೆಲಸ ಮಾಡಬೇಕು’ ಎಂದರು.
ಜೇಸಿಐ ಸಂಸ್ಥೆಯ ಅಧ್ಯಕ್ಷ ಅರವಿಂದ್, ಕಾರ್ಯದರ್ಶಿ ನವೀನ್ ಕುಮಾರ್, ಪುರಸಭೆ ಸದಸ್ಯ ಜಿ.ಎ.ರವೀಂದ್ರ, ಕುಂದಾಣ ವಿ,ಎಸ್.ಎಸ್.ಎನ್ ಅಧ್ಯಕ್ಷ ನರಗನಹಳ್ಳಿ ಶ್ರೀನಿವಾಸ್, ಜೇಸಿಐ ಸದಸ್ಯರಾದ ಎಂ.ಆನಂದ್, ಸುರೇಶ್ ಕುಮಾರ್, ಶಿವಪ್ರಸಾದ್, ಮಂಜುನಾಥ್, ಭರತ್ ಆಚಾರ್ಯ, ಗುರುಮೂರ್ತಿ, ಎಂ.ಬಾಬು, ಮುನಿರಾಜಪ್ಪ, ವಲಯ ಉಪಾಧ್ಯಕ್ಷೆ ಸಮತಾ ಮಿಸ್ಕಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.