ADVERTISEMENT

ಶೀಘ್ರವೇ ಕ್ರಿಮಿನಾಶಕ ಮಾರಾಟ ಮಳಿಗೆ

ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ಆವರಣದಲ್ಲಿ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 14:25 IST
Last Updated 10 ಫೆಬ್ರುವರಿ 2020, 14:25 IST
ಐದನೇ ಬಾರಿ ಅಧ್ಯಕ್ಷರಾದ ಎ.ಸಿ.ನಾಗರಾಜ್ ಅವರನ್ನು ಮುಖಂಡರು ಅಭಿನಂದಿಸಿದರು
ಐದನೇ ಬಾರಿ ಅಧ್ಯಕ್ಷರಾದ ಎ.ಸಿ.ನಾಗರಾಜ್ ಅವರನ್ನು ಮುಖಂಡರು ಅಭಿನಂದಿಸಿದರು   

ದೇವನಹಳ್ಳಿ: ಸ್ಥಳೀಯರ ಬಹುದಿನಗಳ ಬೇಡಿಕೆಯಂತೆ ಶೀಘ್ರದಲ್ಲಿ ರೈತರಿಗೆ ಅನುಕೂಲವಾಗಲು ಕ್ರಿಮಿನಾಶಕ ಮಾರಾಟ ಮಳಿಗೆ ಆರಂಭಸಲಾಗುತ್ತದೆ ಎಂದು ವಿ.ಎಸ್.ಎಸ್.ಎನ್ ನೂತನ ಅಧ್ಯಕ್ಷ ಎ.ಸಿ.ನಾಗರಾಜ್‌ ಹೇಳಿದರು.

ಇಲ್ಲಿನ ಆವತಿ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷರಾಗಿ 5ನೇ ಬಾರಿಗೆ ಅವಿರೋಧವಾಗಿ ಆಯ್ಕೆಗೊಂಡ ಅಧ್ಯಕ್ಷ ಎ.ಸಿ.ನಾಗರಾಜ್‌ಗೆ ಸಂಘದ ಆವರಣದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

1995ರಲ್ಲಿ ಮೊದಲ ಬಾರಿಗೆ ಸಹಕಾರ ಸಂಘಕ್ಕೆ ಸೇರಿದ ಮಾಡಿದ ನಂತರ ಈವರೆಗೆ ಸಂಸ್ಥೆಗೆ ಒಂದು ರೂಪುರೇಷೆಯನ್ನು ನೀಡಿದ್ದೇನೆ. ಇದಕ್ಕೆ ನಿರ್ದೇಶಕರು ಸಹಕರಿಸಿದ್ದಾರೆ ಎಂದರು.

ADVERTISEMENT

ಹಳೆ ಕಟ್ಟಡದಿಂದ ಹೊರಬಂದು ನಿವೇಶನ ಪಡೆದು ಸಂಘಕ್ಕೆ ಸ್ವಂತ ಆಡಳಿತ ಕಚೇರಿ ಮತ್ತು ದಾಸ್ತಾನು ಮಳಿಗೆ ನಿರ್ಮಾಣ ಮಾಡಿ ವೆಂಕಟಗಿರಿಕೋಟೆ, ಹಾರೋಹಳ್ಳಿ, ಬಿಜ್ಜವಾರ ಗ್ರಾಮಗಳ ಸಹಕಾರ ಸಂಘದ ಉಪಶಾಖೆಯನ್ನು ಆರಂಭಿಸಿ ವಾರ್ಷಿಕ ₹35 ಕೋಟಿ ವಹಿವಾಟು ಎಂದರೆ ಅಷ್ಟು ಸುಲಭವಲ್ಲ ಎಂದು ಹೇಳಿದರು.

ಈ ಸಹಕಾರ ಸಂಘದವತಿಯಿಂದ 23 ನ್ಯಾಯಬೆಲೆ ಅಂಗಡಿಗಳಿಗೆ ಸಗಟು ಪಡಿತರ ಧಾನ್ಯ ವಿತರಿಸಲಾಗುತ್ತಿದೆ ಬ್ಯಾಂಕಿಂಗ್ ವ್ಯವಸ್ಥೆ ಇದ್ದು 150 ಸ್ವಸಹಾಯ ಗುಂಪುಗಳಿಗೆ ₹1.5ಕೋಟಿ ಸಾಲ ಕಳೆದ ವರ್ಷ ನೀಡಿದ್ದು, ಸಂಘಕ್ಕೆ ₹18.90 ಲಕ್ಷ ವ್ಯಾಪಾರ ಲಾಭ ಬಂದಿದೆ ಎಂದರು.

ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ಮತ್ತು ಸಮ್ಮಿಶ್ರ ಸರ್ಕಾರವಿದ್ದಾಗ 1.54 ಕೋಟಿ ರೈತರ ಸಾಲ ಮನ್ನಾವಾಗಿದೆ ಕಳೆದ ವರ್ಷ ₹1.16 ಕೋಟಿ ಸಾಲ ನೀಡಲಾಗಿತ್ತು 2020–21ನೇ ಸಾಲಿನಲ್ಲಿ ₹2 ಕೋಟಿ ಸಾಲ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

‘ಜುವಾರಿ, ಮಂಗಳ ಮತ್ತು ಐ.ಪಿ.ಎಲ್.ಕಂಪನಿಗಳಿಂದ ನೇರವಾಗಿ ರಸಗೊಬ್ಬರ ಖರೀದಿಸಿ ರೈತರಿಗೆ ಮಾರಾಟ ಮಾಡುವ ವ್ಯವಸ್ಥೆ ಇರುವ ತಾಲ್ಲೂಕಿನ ಏಕೈಕ ಸಹಕಾರ ಸಂಘ ನಮ್ಮದು. ಸಂಘದ ಸ್ವಂತ ಬಂಡವಾಳದಲ್ಲಿ ನೀಡುವ ಸಾಲವನ್ನು ರೈತರು ಸಕಾಲದಲ್ಲಿ ಪಾವತಿ ಮಾಡಿದರೆ ಇತರೆ ರೈತರಿಗೆ ಹೆಚ್ಚಿನ ಅನುಕೂಲ. ಕೃಷಿ ಇಲಾಖೆ ಜಂಟಿ ನಿರ್ದೇಶಕ ಬಳಿ ಕ್ರಿಮಿನಾಶಕ ಆರಂಭಕ್ಕೆ ಕಡತವಿದ್ದು ಪರವಾನಗಿಗೆ ಕಾಯುತ್ತಿದ್ದೇವೆ’ ಎಂದು ಹೇಳಿದರು.

ನೂತನ ಉಪಾಧ್ಯಕ್ಷ ದೇವರಾಜ್, ನಿರ್ದೇಶಕರಾದ ಎಚ್.ಸಿ.ಮುನಿರಾಜು, ರಾಜ್ ಗೋಪಾಲ್, ಗೊಬ್ಬರಗುಂಟೆ ರಾಜ್ ಗೋಪಾಲ್, ಮುನಿರಾಜು, ಸಿ.ಸಜ್ಜಾದ್, ಹುಸೇನ್ ಸಾಬ್, ಶ್ಯಾಮಣ್ಣ, ಆಂಜನಮ್ಮ, ಸಂಪಂಗಮ್ಮ, ಬಿ.ಶ್ರೀನಿವಾಸ್ ಹಾಗೂ ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.