ದೇವನಹಳ್ಳಿ: ಪ್ರತಿ ಗರ್ಭಿಣಿಯರು ಗುಣಾತ್ಮಕ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಿದೆ ಎಂದು ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಂ.ರೇವಣ್ಣ ಹೇಳಿದರು.
ಇಲ್ಲಿನ ಕೋಡಗುರ್ಕಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಗರ್ಭಿಣಿಯರಿಗೆ ತಾಯಿ ಆರೋಗ್ಯ ಕಾರ್ಡ್ ಮತ್ತು ಸಾರ್ವತ್ರಿಕ ಲಸಿಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಸರ್ಕಾರಿ ಆಸ್ಪತ್ರೆಯಲ್ಲಿ ತಾಯಂದಿರಿಗೆ ಮತ್ತು ಗರ್ಭಿಣಿಯರಿಗೆ ಬಿ.ಸಿ.ಜಿ. ಪೆಂಟಾವೈಯಲೆಂಟ್, ದಡಾರ, ಡಿ.ಪಿ.ಟಿ, ಮತ್ತು ಟಿ.ಡಿ. ಲಸಿಕೆಗಳನ್ನು ಉಚಿತವಾಗಿ ನೀಡಲಾಗುತ್ತಿದೆ. ಮಾರಕ ರೋಗಗಳ ಮುಂಜಾಗ್ರತೆ ಕ್ರಮಕ್ಕೆ ಇದು ಅನಿವಾರ್ಯ. ಇತರೆ ರಾಜ್ಯ ಮತ್ತು ಜಿಲ್ಲೆಗಳಿಂದ ವಲಸೆ ಬಂದಿರುವ ಗರ್ಭಿಣಿಯರಿಗೆ ಉಚಿತ ಲಸಿಕೆ ಜೊತೆಗೆ ತಾಯಿ ಕಾರ್ಡ್ ವಿತರಿಸಲಾಗುತ್ತಿದೆ ಎಂದು ಹೇಳಿದರು.
4.10 ಅಡಿಗಿಂತ ಕುಳ್ಳಗಿರುವ ಚೊಚ್ಚಲ ಗರ್ಭಿಣಿಯರು, ತೀವ್ರ ರಕ್ತಹೀನತೆ, ಕೈಕಾಲು ಊತ ಇರುವ ಗರ್ಭಿಣಿಯರು, ರಕ್ತದೊತ್ತಡ ಅಧಿಕವಾಗಿರುವವರು, ಈ ಹಿಂದಿನ ಹೆರಿಗೆ ಸಂದರ್ಭದಲ್ಲಿ ಸಿಜೇರಿಯನ್ ಆಗಿದ್ದು ಪ್ರಸ್ತುತ ಗರ್ಭಿಣಿಯಾಗಿರುವವರು, ಅವಳಿ, ತ್ರಿವಳಿ ಮಕ್ಕಳು ಇದ್ದಲ್ಲಿ ಮತ್ತು ಅಡ್ಡವಿರುವ ಭ್ರೂಣ, ಹೆರಿಗೆಯ ಮೊದಲು ರಕ್ತಸ್ರಾವ, ಗರ್ಭಾಶಯದಲ್ಲಿ ಗೆಡ್ಡೆ, ಮಧುಮೇಹ, ಭ್ರೂಣ ಬೆಳವಣಿಗೆ ಕುಂಟಿತ ಮುಂತಾದ ಗರ್ಭಿಣಿಯರಲ್ಲಿ ಕಂಡು ಬರುವ ಲಕ್ಷಣ ಮತ್ತು ಕಂಡುಕೊಳ್ಳಬೇಕಾದ ಪರಿಹಾರದ ಬಗ್ಗೆ ಅವರು ಮನವರಿಕೆ ಮಾಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.