ದೇವನಹಳ್ಳಿ: ಸರ್ಕಾರಿ ಸ್ವತ್ತಿಗೆ ಅಕ್ರಮ ತಡೆಗೋಡೆ ನಿರ್ಮಾಣಕ್ಕೆ ಮುಂದಾಗಿದ್ದ ಕೆಲ ಗ್ರಾಮಸ್ಥರ ಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಡೆ ನೀಡಿದ್ದಾರೆ ಎಂದು ಎಸ್.ತೆಲ್ಲೋಹಳ್ಳಿ ಗ್ರಾಮದ ಮುಖಂಡರಾದ ವೆಂಕಟೇಶ್ ಮೂರ್ತಿ ಹಾಗೂ ಕೆ.ವೆಂಕಟೇಶ್ ತಿಳಿಸಿದರು.
ಈ ಕುರಿತು ಮಾಹಿತಿ ನೀಡಿದ ಅವರು ’ಗ್ರಾಮದ ಸರ್ಕಾರಿ ಶಾಲೆ ಆವರಣದಲ್ಲಿ ಈಗಾಗಲೇ ಕಾಂಪೌಂಡ್ ನಿರ್ಮಿಸಲಾಗಿದೆ. ಕೆಲವರು ನಕಲಿ ದಾಖಲೆ ಸೃಷ್ಟಿಸಿ ಶಾಲಾ ಆಸ್ತಿ ಕಬಳಿಸಲು ಹುನ್ನಾರ ನಡೆಸಿದ್ದರು. ಈಗಿರುವ ಶಾಲಾ ಕಾಂಪೌಂಡ್ ಒಳಗೆ ಮತ್ತೊಂದು ಕಾಂಪೌಂಡ್ ನಿರ್ಮಾಣಕ್ಕೆ ಮುಂದಾಗಿದ್ದರು. ಈ ಅಕ್ರಮ ತಡೆಯಬೇಕೆಂದು ಗ್ರಾಮಸ್ಥರು ಇಒ ಮತ್ತು ಸಿಇಒ ಅವರಿಗೆ ದೂರು ನೀಡಿದ್ದರು. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಅಕ್ರಮದಾರರ ವಿರುದ್ಧ ಕ್ರಿಮಿನಲ್ ಪ್ರಕರಣದ ಎಚ್ಚರಿಕೆ ನೀಡಿದ್ದು, ಕಾಮಗಾರಿ ಸ್ಥಗಿತಗೊಂಡಿದೆ’ ಎಂದು ತಿಳಿಸಿದರು.
’ತೆಲ್ಲೋಹಳ್ಳಿ ಗ್ರಾಮ ಸರ್ವೆ ನಂಬರ್ 4ರಲ್ಲಿ ಒಟ್ಟು 7.6ಎಕರೆ ಸರ್ಕಾರಿ ಖರಾಬು ಎಂದು ಪಹಣಿಯಲ್ಲಿ ದಾಖಲಾಗಿದೆ. ಈ ಜಾಗದ ಪೈಕಿ 5ಗುಂಟೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮಂಜೂರಾಗಿದೆ. ಸರ್ಕಾರಿ ಶಾಲೆ, ಹಾಲು ಉತ್ಪಾದಕರ ಸಹಕಾರ ಸಂಘ, ಓವರ್ ಹೆಡ್ ಟ್ಯಾಂಕ್, ಗಣೇಶ ದೇವಾಲಯ, ಕೋದಂಡರಾಮ ದೇವಾಲಯ ಸೇರಿ ಅಂದಾಜು 20ಗುಂಟೆಯಲ್ಲಿದೆ. ಈಗ ಆಟದ ವೈದಾನದಲ್ಲಿ ಅಕ್ರಮ ಎಸಗಲು ಹೊರಟಿದ್ದಾರೆ’ ಎಂದು ದೂರಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.