ADVERTISEMENT

ಮೂಲಸೌಲಭ್ಯ ಕಲ್ಪಿಸಲು ಆದ್ಯತೆ: ಶಾಸಕ ಬಿ.ಶಿವಣ್ಣ

ಆನೇಕಲ್: ವಿದ್ಯುತ್‌ ದೀಪಗಳ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2020, 13:05 IST
Last Updated 16 ಸೆಪ್ಟೆಂಬರ್ 2020, 13:05 IST
ಆನೇಕಲ್‌ನ ದ್ವಿಪಥದ ರಸ್ತೆಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆಗೆ ಶಾಸಕ ಬಿ.ಶಿವಣ್ಣ ಚಾಲನೆ ನೀಡಿ ಮಾತನಾಡಿದರು
ಆನೇಕಲ್‌ನ ದ್ವಿಪಥದ ರಸ್ತೆಯಲ್ಲಿ ವಿದ್ಯುತ್ ದೀಪಗಳ ಅಳವಡಿಕೆಗೆ ಶಾಸಕ ಬಿ.ಶಿವಣ್ಣ ಚಾಲನೆ ನೀಡಿ ಮಾತನಾಡಿದರು   

ಆನೇಕಲ್: ‘ಪಟ್ಟಣಕ್ಕೆ ಮೂಲಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಚುನಾವಣೆ ಸಂದರ್ಭದಲ್ಲಿ ನೀಡಲಾಗಿದ್ದ ಬಹುತೇಕ ಎಲ್ಲಾ ಭರವಸೆಗಳನ್ನು ಈಡೇರಿಸಿರುವ ತೃಪ್ತಿಯಿದೆ. ಮತ್ತಷ್ಟು ಅಭಿವೃದ್ಧಿ ಕಾರ್ಯಗಳ ಮೂಲಕ ಜನಸ್ನೇಹಿ ಆಡಳಿತ ನೀಡಬೇಕಾಗಿದೆ’ ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.

ಅವರು ಪಟ್ಟಣದ ಮಿರ್ಜಾ ರಸ್ತೆ ಮತ್ತು ಬನ್ನೇರುಘಟ್ಟ ದ್ವಿಪಥ ರಸ್ತೆಯಲ್ಲಿ ಅಳವಡಿಸಲಾಗಿರುವ ವಿದ್ಯುತ್‌ ದೀಪಗಳ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

‘ಆನೇಕಲ್‌ಗೆ ಕಾವೇರಿ ಕುಡಿಯುವ ನೀರು ಪೂರೈಕೆ ಮಾಡಲಾಗಿದೆ. ಬಿಬಿಎಂಪಿ ವ್ಯಾಪ್ತಿಯ ಹೊರಗಡೆ ಕಾವೇರಿ ನೀರು ಪಡೆದಿರುವ ಏಕೈಕ ತಾಲ್ಲೂಕು ಆನೇಕಲ್ ತಾಲ್ಲೂಕಾಗಿದೆ. ನೀರಿನ ಪೂರೈಕೆಯಲ್ಲಿ ಇರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪೈಪ್‌ಲೈನ್‌ ಕಾಮಗಾರಿ ನಡೆಯುತ್ತಿದೆ. ಪೂರ್ಣಗೊಂಡ ನಂತರ ಪೂರೈಕೆ ಸುಧಾರಣೆಯಾಗಲಿದೆ. ಡಿಸೆಂಬರ್‌ ಒಳಗೆ ಆನೇಕಲ್‌ ತಾಲ್ಲೂಕಿನ 66 ಕೆರೆಗಳನ್ನು ತುಂಬುವ ಏತನೀರಾವರಿ ಯೋಜನೆ ಅನುಷ್ಠಾನಕ್ಕೆ ಬರಲಿದೆ’ ಎಂದರು.

ADVERTISEMENT

‘ಹೊಸೂರು ರಸ್ತೆ, ಅತ್ತಿಬೆಲೆ ರಸ್ತೆ ಮತ್ತು ಥಳೀ ರಸ್ತೆಗಳ ಅಗಲೀಕರಣ ಕಾರ್ಯ ಪ್ರಗತಿಯಲ್ಲಿದೆ. ಆನೇಕಲ್‌ಗೆ ಸಂಪರ್ಕ ಕಲ್ಪಿಸುವ ಎಲ್ಲಾ ರಸ್ತೆಗಳನ್ನು ದ್ವಿಪಥದ ರಸ್ತೆಗಳನ್ನಾಗಿ ಮಾಡಿ ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್‌ ದೀಪ ಅಳವಡಿಕೆ ಮಾಡಿ ಹೊಸ ರೂಪ ನೀಡಲಾಗುವುದು’ ಎಂದರು.

‘ಈ ಹಿಂದಿನ ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ವಿವಿಧ ಕಾಮಗಾರಿಗಳಿಗಾಗಿ ₹ 70 ಕೋಟಿ ಅನುದಾನ ಮಂಜೂರು ಮಾಡಿಸಲಾಗಿತ್ತು. ಆದರೆ ಮಂಜೂರಾಗಿರುವ ಅನುದಾನ ಬಿಡುಗಡೆ ಮಾಡಲು ಸರ್ಕಾರ ಮೀನಾಮೇಷ ಎಣಿಸುತ್ತಿದೆ’ ಎಂದರು.

ಪುರಸಭಾ ಸದಸ್ಯರಾದ ಮುನಾವರ್‌, ರವಿಚೇತನ್‌, ಕೃಷ್ಣ, ಮಹಾಂತೇಶ್‌, ಭಾರತಿ ವಿರೂಪಾಕ್ಷ, ಗಂಗಾಧರ್‌, ರಾಜಪ್ಪ, ಟೌನ್‌ ಕಾಂಗ್ರೆಸ್‌ ಅಧ್ಯಕ್ಷ ಜಿ.ಗೋಪಾಲ್‌, ಮುಖಂಡರಾದ ಪಿ.ಶಂಕರ್‌ಕುಮಾರ್‌, ಹಾ.ವೇ.ವೆಂಕಟೇಶ್‌, ಮಲ್ಲಿಕಾರ್ಜುನ್‌, ರಾಜೇಂದ್ರಬಾಬು, ಶೈಲೇಂದ್ರಕುಮಾರ್‌, ವಿನಯ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.