ADVERTISEMENT

‘ಪೂರ್ವಿಕರು ನಿರ್ಮಿಸಿದ ಜಲಮೂಲ ರಕ್ಷಿಸಿ ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 13:19 IST
Last Updated 18 ಜನವರಿ 2019, 13:19 IST
ನಾಗರಬಾವಿ ಹೂಳೆತ್ತುವ ಕಾಮಗಾರಿ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ನಡೆಯಿತು
ನಾಗರಬಾವಿ ಹೂಳೆತ್ತುವ ಕಾಮಗಾರಿ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ನಡೆಯಿತು   

ವಿಜಯಪುರ: ನೀರಿನ ಕೊರತೆ ನೀಗಿಸಲು ಪೂರ್ವಿಕರು ನಿರ್ಮಾಣ ಮಾಡಿರುವ ಜಲಮೂಲಗಳನ್ನು ಜೀರ್ಣೋದ್ಧಾರಗೊಳಿಸಿ ಉಳಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ನಿವೃತ್ತ ಪುರಸಭಾ ಮುಖ್ಯಾಧಿಕಾರಿ ಶಿವಕುಮಾರ್ ಹೇಳಿದರು.

ಸಂಗಮೇಶ್ವರ ಧರ್ಮಸಂಸ್ಥೆಗೆ ಸೇರಿದ ಪುರಾತನ ನಾಗರಬಾವಿಯನ್ನು ₹40ಲಕ್ಷ ವೆಚ್ಚದಲ್ಲಿ ಹೂಳು ತೆಗೆಯುವ ಕಾಮಗಾರಿ ನಡೆಯುತ್ತಿದ್ದು ಅದನ್ನು ವೀಕ್ಷಿಸಿ ಮಾತನಾಡಿದರು.

ನಗರದ ಅಂಕತಟ್ಟಿ ನಂಜುಂಡಪ್ಪ ಅವರ ಕುಟುಂಬಸ್ಥರು ಗ್ರಾಮದ ಒಳಿತಿಗಾಗಿ ನಿರ್ಮಾಣ ಮಾಡಿದ್ದ ನಾಗರಬಾವಿ ನೀರನ್ನು ಹಿಂದೆ ಗ್ರಾಮಸ್ಥರು ಉಪಯೋಗಿಸುತ್ತಿದ್ದರು. ಈ ಬಾವಿ ತುಂಬಿದಾಗ ಸುತ್ತಲಿನ ಎಲ್ಲಾ ಬಾವಿಗಳಲ್ಲಿ ಅಂತರ್ಜಲ ಹೆಚ್ಚುತ್ತಿತ್ತು. ಪಕ್ಕದಲ್ಲೇ ಮಂಟಪ ನಿರ್ಮಾಣ ಮಾಡಿ ಶಿವಪೂಜೆಗೆ, ಮತ್ತೊಂದು ಕಡೆಯಲ್ಲಿ ವಿಶ್ರಾಂತ ಗೃಹ ನಿರ್ಮಿಸಲಾಗಿತ್ತು. ಈಗ ಸೂಕ್ತ ನಿರ್ವಹಣೆ ಇಲ್ಲದೆ ಕಟ್ಟಡಗಳು ಶಿಥಿಲಾವಸ್ಥೆ ತಲುಪಿವೆ ಎಂದರು.

ಇಲ್ಲಿನ ಅಯೋದ್ಯಾ ಶಿವಾಚಾರ್ಯ ವೈಶ್ಯ ನಗರ್ತ ಮಹಂತಿನಮಠ ಧರ್ಮಸಂಸ್ಥೆ, ನಗರ್ತ ಯುವಕ ಸಂಘ, ನಗರ್ತ ಮಹಿಳಾ ಸಂಘ, ನಗರೇಶ್ವರಸ್ವಾಮಿ ಸೇವಾ ಟ್ರಸ್ಟ್, ಹರಿಹರ ಬ್ರಹ್ಮರಥೋತ್ಸವ ಸಮಿತಿ, ಹರಿಹರ ಬ್ರಹ್ಮರಥೋತ್ಸವ ದಾಸೋಹ ಸಮಿತಿ, ಕೋರಮಂಗಲ ರುದ್ರಪ್ಪ ಟ್ರಸ್ಟ್, ರುದ್ರದೇವರ ದೇವಾಲಯ ಅಭಿವೃದ್ಧಿ ಟ್ರಸ್ಟ್‌ಸಹಯೋಗ ಮತ್ತು ನಗರದ ಜನರ ಸಹಕಾರದಿಂದ ಹೂಳು ತೆಗೆಯುವ ಕಾರ್ಯ ನಡೆದಿದೆ ಎಂದರು.

ಮುಖಂಡ ರುದ್ರಮೂರ್ತಿ ಮಾತನಾಡಿ, ಇದು ಪೂರ್ವಿಕರು ನಿರ್ಮಾಣ ಮಾಡಿರುವ ಕುಂಟೆ ಎಂದು ಸರ್ಕಾರಕ್ಕೆ ಮನವಿ ಮಾಡಿದರೂ ಜೀರ್ಣೋದ್ಧಾರಕ್ಕೆ ಗಮನ ಹರಿಸಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ₹5 ಲಕ್ಷ ಮಂಜೂರು ಮಾಡಿರುವುದಾಗಿ ಭರವಸೆ ನೀಡಿದ್ದರು. ಅದರಂತೆ ನಡೆದುಕೊಳ್ಳಲಿಲ್ಲ. ‌ಹಲವು ಸಂಘಟನೆಗಳ ನೆರವಿನಿಂದ ಹೂಳೆತ್ತುವ ಕಾರ್ಯ ನಡೆದಿದೆ ಎಂದು ತಿಳಿಸಿದರು.

ಮುಖಂಡರಾದ ವಿ.ವಿಶ್ವನಾಥ್, ಪುನೀತ್ ಕುಮಾರ್, ನಾಗರಾಜ್, ಎನ್.ವಿಶ್ವನಾಥ್, ಎಲ್.ರವಿ, ದೇವನಹಳ್ಳಿ ರಾಜು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.