ADVERTISEMENT

ನೀರು ಹರಿಸುವಲ್ಲಿ ತಾರತಮ್ಯ ಆರೋಪ

ದೇವನಹಳ್ಳಿ: ಅಣ್ಣೇಘಟ್ಟದ ಗ್ರಾಮಸ್ಥರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2020, 6:10 IST
Last Updated 18 ಸೆಪ್ಟೆಂಬರ್ 2020, 6:10 IST
ಕೆರೆ ಕೊಡಿಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಸ್ಥಳೀಯ ಗ್ರಾಮಸ್ಥರು
ಕೆರೆ ಕೊಡಿಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದ ಸ್ಥಳೀಯ ಗ್ರಾಮಸ್ಥರು   

ದೇವನಹಳ್ಳಿ: ‘ಬೆಂಗಳೂರಿನ ಹೆಬ್ಬಾಳ ನಾಗವಾರ ಕೆರೆ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಕೆರೆಗಳಿಗೆ ಹರಿಸುವಲ್ಲಿ ತಾರತಮ್ಯ ಮಾಡಲಾಗುತ್ತಿದೆ’ ಎಂದು ಸಾವಕನಹಳ್ಳಿ, ಅಣ್ಣೇಘಟ್ಟದ ಗ್ರಾಮಸ್ಥರು ಇಲ್ಲಿನ ಬಿದಲೂರು ಅಮಾನಿಕೆರೆ ಕೋಡಿ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಿದರು.

ತಾಲ್ಲೂಕು ಕೃಷಿಕ ಸಮಾಜ ನಿರ್ದೇಶಕ ಎಸ್.ಪಿ ಮುನಿರಾಜು ಮಾತನಾಡಿ, ‘ತಾಲ್ಲೂಕಿನಲ್ಲಿ 3
ಕೆರೆ ಹೊರತುಪಡಿಸಿದರೆ ಇನ್ನು 6 ಕೆರೆಗಳಿಗೆ ನೀರು ಹರಿದಿಲ್ಲ. ಪ್ರಸ್ತುತ ಎರಡು ಇಂಚು ನೀರು ಬರುತ್ತಿದೆ. ಉಳಿದ ನೀರೆಲ್ಲಾ ಚಿಕ್ಕಬಳ್ಳಾಪುರದ ಕೆರೆಗಳಿಗೆ ಹರಿಯುತ್ತಿದೆ. ನಾವು ಇಲ್ಲಿ ಅನಾಥರಾಗಿದ್ದೇವೆ’ ಎಂದು ದೂರಿದರು.

‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಈ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಭೂಮಿ ಪೂಜೆ ನಡೆಸಲಾಗಿತ್ತು. ದೇವನಹಳ್ಳಿ ದೊಡ್ಡ ಅಮಾನಿಕೆರೆ 386 ಎಕರೆ ವಿಸ್ತೀರ್ಣ ಹೊಂದಿದೆ. ಎರಡು ಕೆರೆ ಕೋಡಿ ನಿರ್ಮಿಸಲಾಗಿದೆ. ಜೌಗು ರೀತಿಯಲ್ಲಿ ನೀರು ಹರಿದರೆ ಒಂದು ವರ್ಷವಾದರೂ ಕೆರೆ ತುಂಬುವ ಲಕ್ಷಣ ಕಾಣುವುದಿಲ್ಲ. ಸರ್ಕಾರ ಮತ್ತು ಇಲಾಖೆ ಹಿರಿಯ ಅಧಿಕಾರಿಗಳು ರೈತರ ಕಣ್ಣೋರಿಸುವ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ADVERTISEMENT

ದೇವನಹಳ್ಳಿ ಪುರಸಭೆ ಮತ್ತು ಸುತ್ತಮುತ್ತ ಇರುವ ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ 3,500 ಸಾವಿರಕ್ಕಿಂತ ಹೆಚ್ಚು ಕೊಳವೆ ಬಾವಿಗಳಿವೆ. ಈ ಪೈಕಿ ಅನೇಕ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಕೆರೆ ತುಂಬಿದರೆ ಮಾತ್ರ ಅಂತರ್ಜಲ ವೃದ್ಧಿಯಾಗಿ ತೋಟಗಾರಿಕೆಗೆ ಮತ್ತು ಕುಡಿಯಲು ನೀರು ಸಿಗಲಿದೆ. ನಗರದ ಪಕ್ಕದಲ್ಲೆ ಇರುವ ಕೆರೆಗೆ ನೀರು ಹರಿಸದಿದ್ದರೆ ಹೇಗೆ ಇದೊಂದು ಸಾಂತೇತಿಕ ಧರಣಿ ಅಷ್ಟೆ. ಕೆರೆಗೆ ಇನ್ನಷ್ಟು ಹೆಚ್ಚುವರಿ ನೀರು ಹರಿಸಿ ದೊಡ್ಡ ಅಮಾನಿಕೆರೆ ತುಂಬಿಸಬೇಕು. ಇಲ್ಲದಿದ್ದಲ್ಲಿ ಜಿಲ್ಲಾಡಳಿತ ಭವನ ಚಲೋ ಹಮ್ಮಿಕೊಂಡು ಎತ್ತಿನಗಾಡಿಯೊಂದಿಗೆ ಮುತ್ತಿಗೆ ಹಾಕಲಾಗುವುದೆಂದು ಹೇಳಿದರು.

ಮುಖಂಡ ಆಂಜಿನಪ್ಪ, ಚನ್ನಪ್ಪ, ರಾಜಣ್ಣ, ಆನಂದ್, ಕೃಷ್ಣಪ್ಪ, ಶಿವಣ್ಣ, ಅಣ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.