ಆನೇಕಲ್: ಹಾಥರಸ್ನ ಯುವತಿ ಮೇಲಿನ ಅತ್ಯಾಚಾರವನ್ನು ಖಂಡಿಸಿ ತಾಲ್ಲೂಕಿನ ಚಂದಾಪುರದಲ್ಲಿ ವಿವಿಧ ದಲಿತ ಸಂಘಟನೆಗಳು ನೇತೃತ್ವದಲ್ಲಿ ಅಣುಕು ಶವಯಾತ್ರೆ ಪ್ರತಿಭಟನೆ ನಡೆಯಿತು.
ಮುಖಂಡ ಬಿ.ಗೋಪಾಲ್ ಮಾತನಾಡಿ, ‘ಉತ್ತರ ಪ್ರದೇಶದಲ್ಲಿ ರಾಮರಾಜ್ಯ ಮಾಡುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ಬಿಜೆಪಿ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಅಲ್ಲಿಯ ದಲಿತರಿಗೆ, ಮಹಿಳೆಯರಿಗೆ ರಕ್ಷಣೆ ಇಲ್ಲದಂತೆ ಮಾಡಿ ಅಮಾನವೀಯವಾಗಿ ನಡೆಸಿಕೊಂಡಿದೆ. ಅತ್ಯಾಚಾರದ ಆರೋಪಿಗಳಿಗೆ ಗಲ್ಲುಶಿಕ್ಷೆ ನೀಡಬೇಕು. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜೀನಾಮೆ ನೀಡಬೇಕು’ ಎಂದರು.
ಮುಖಂಡರಾದ ಫಟಾಫಟ್ ನಾಗರಾಜು, ಚಿನ್ನಪ್ಪ ವೈ.ಚಿಕ್ಕಹಾಗಡೆ, ಆರ್.ಎಂ.ಎನ್.ರಮೇಶ್, ಕೃಷ್ಣಮೂರ್ತಿ, ನಾಗಪ್ಪ, ಸುರೇಶ್ ಪೋತಾ, ರಾಮಕೃಷ್ಣ, ನಾಗರಾಜ್ ಮೌರ್ಯ, ಆನಂದ ಚಕ್ರವರ್ತಿ, ಸಿ.ರಾವಣ, ವೆಂಕಟೇಶ್ಮೂರ್ತಿ, ಮಮತಾ, ಯಶೋದಮ್ಮ, ವಿಜಯಕುಮಾರಿ ಹಾಜರಿದ್ದರು.
ಚಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಮಾಯಿಸಿದ ವಿವಿಧ ದಲಿತ ಸಂಘಟನೆಗಳ ಕಾರ್ಯಕರ್ತರು ತಮಟೆ ಚಳವಳಿ, ಅಣಕು ಶವಯಾತ್ರೆ ನಡೆಸಿ ಉತ್ತರ ಪ್ರದೇಶ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.