ದೇವನಹಳ್ಳಿ: ‘ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವವನ್ನು ಮೈಗೂಡಿಸಿಕೊಂಡರೆ ಜ್ಞಾನ ವೃದ್ಧಿಯಾಗುತ್ತದೆ. ರಸಪ್ರಶ್ನೆ ಕಾರ್ಯಕ್ರಮಗಳು ನಮ್ಮ ಜ್ಞಾನದ ಮಟ್ಟ ಪರೀಕ್ಷಿಸಿಕೊಳ್ಳಲು ವೇದಿಕೆಯಾಗಿವೆ’ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಎಸ್.ಎಂ. ರವಿಕುಮಾರ್ ತಿಳಿಸಿದರು.
ಇಲ್ಲಿನ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಶನಿವಾರ ನೆಹರೂ ಯುವ ಕೇಂದ್ರ ಹಾಗೂ ಪರಿವರ್ತನಾ ಕಲಾ ಸಂಸ್ಥೆಯ ಸಹಯೋಗದಡಿ ಸಂವಿಧಾನ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸಂವಿಧಾನ ಕುರಿತ ರಸಪ್ರಶ್ನೆ ಸ್ಪರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಪಠ್ಯದೊಂದಿಗೆ ದೈನಂದಿನ ವಿದ್ಯಮಾನ ಕುರಿತು ವಿದ್ಯಾರ್ಥಿಗಳು ಗಮನಹರಿಸಿದರೆ ಮಾತ್ರವೇ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಉನ್ನತ ಸ್ಥಾನಕ್ಕೇರಲು ಸಾಧ್ಯ. ಸಮಯ ನಿರ್ವಹಣೆಯು ಜೀವನದಲ್ಲಿ ಅತ್ಯಂತ ಮುಖ್ಯವಾದುದು. ಶಿಸ್ತಿನಿಂದ ಕಲಿಕೆಯಲ್ಲಿ ತೊಡಗಿಸಿಕೊಂಡರೆ ಮಾತ್ರವೇ ಯಶಸ್ಸು ಕಟ್ಟಿಟ್ಟಬುತ್ತಿ ಎಂದು
ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ರಾಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಂಜುಳಾ ಶಿವಬಸಪ್ಪ ದೇವಸೂರ, ಮೊಬೈಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಬದಲು ಅಲ್ಲಿಯೇ ಸಾಕಷ್ಟು ವಿಚಾರಧಾರೆ ಕಲಿಯಲು ಅವಕಾಶವಿದೆ. ಅದರ ಸದ್ಬಳಕೆಗೆ ವಿದ್ಯಾರ್ಥಿಗಳು ಮುಂದಾಗಬೇಕು ಎಂದು ಸಲಹೆ ನೀಡಿದರು.
ಡಾ.ದೇವನಹಳ್ಳಿ ದೇವರಾಜ್ ಹಾಗೂ ರಾಜ್ಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ರಾಘವೇಂದ್ರರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಸಹ ಪ್ರಾಧ್ಯಾಪಕರಾದ ರವಿಕುಮಾರ್, ಶಿವಪ್ರಕಾಶ್, ಪರಿವರ್ತನಾ ಕಲಾ ಸಂಸ್ಥೆಯ ಕಾರ್ಯದರ್ಶಿ ದೀಪಿಕಾ ದೇವರಾಜ್, ಕಲಾವಿದರಾದ ಹಾಸನ್ ತೇಜಸ್ ಗೌಡ, ಪಾತೂರು ನವ್ಯಶ್ರೀ, ಸುಪ್ರಿಯಾ ಗಗನ್, ಪಾರ್ಥಪ್ರಸಾದ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.