ಶ್ರೀನಿವಾಸಪುರ: ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ನೈಸರ್ಗಿಕ ಅಣಬೆ ನೆಲದಿಂದ ಪುಟಿಯುತ್ತಿದೆ. ಗ್ರಾಮೀಣರು ಬೆಳಿಗ್ಗೆ ಎದ್ದು ಮಾವಿನ ತೋಟಗಳಲ್ಲಿ ಸುತ್ತಾಡಿ ಅಣಬೆ ಕಿತ್ತು ತರುವುದು ಸಾಮಾನ್ಯವಾಗಿದೆ.
ಮಳೆ ಕೊರತೆ ಪರಿಣಾಮವಾಗಿ ಹಿಂದಿನ ವರ್ಷಗಳಲ್ಲಿ ಅಣಬೆ ದೊರೆಯುವ ಪ್ರಮಾಣ ಕಡಿಮೆಯಾಗಿತ್ತು. ಆದರೆ ಈ ಬಾರಿ ತೋಟಗಳ ಬೇಲಿ ಬದುಗಳು ಹಾಗೂ ಬಯಲಿನಲ್ಲಿಯೂ ಅಣಬೆ ಕಾಣಿಸಿಕೊಂಡಿವೆ. ಇದರಿಂದ ಅಣಬೆ ಪ್ರಿಯರ ಸಂತೋಷ ಹೇಳತೀರದು.
ಹಿಂದೆ ಅಣಬೆಯನ್ನು ಸಾಂಬಾರು ತಯಾರಿಕೆಗೆ ಮಾತ್ರ ಬಳಸಲಾಗುತ್ತಿತ್ತು. ಹೆಚ್ಚಾಗಿ ಸಿಕ್ಕಿದರೆ ತಮಗೆ ಬೇಕಾದವರಿಗೆ ಅಥವಾ ಕೇಳಿದವರಿಗೆ ಕೊಟ್ಟುಬಿಡುತ್ತಿದ್ದರು. ಬದಲಾದ ಪರಿಸ್ಥಿತಿಯಲ್ಲಿ ನೈಸರ್ಗಿಕ ಅಣಬೆಗೂ ಆರ್ಥಿಕ ಮೌಲ್ಯ ಬಂದಿದೆ. ಕಾಡುಮೇಡು ಸುತ್ತಿ ಅಣಬೆ ಸಂಗ್ರಹಿಸಿ ಸಮೀಪದ ಪಟ್ಟಣಕ್ಕೆ ಕೊಂಡೊಯ್ದು ಮಾರುತ್ತಿದ್ದಾರೆ. ‘ನೈಸರ್ಗಿಕ ಅಣಬೆಯ ಬೆಲೆ ಚಿಕನ್ಗಿಂತ ತುಸು ಹೆಚ್ಚು’ ಎಂಬ ಮಾತು ಸಾಮಾನ್ಯವಾಗಿ
ಕೇಳಿಬರುತ್ತದೆ.
ಬೆಲೆ ಹೆಚ್ಚಾದರೂ ಅಣಬೆ ರುಚಿಗೆ ಮಾರುಹೋದ ಜನರು ಮರು ಮಾತನ್ನಾಡದೆಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಕೃತಕವಾಗಿ ಬೆಳೆದ ಅಣಬೆಯು ನೈಸರ್ಗಿಕ ಅಣಬೆಯ ಮುಂದೆ ಸಪ್ಪೆ ಎಂಬುದು ಅಣಬೆ ಪ್ರಿಯರ ಅನಿಸಿಕೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.