ದೊಡ್ಡಬಳ್ಳಾಪುರ: ತಾಲ್ಲೂಕಿನ ರಾಜಘಟ್ಟ ವಿಶ್ವ ಪಾರಂಪರಿಕ ತಾಣವಾಗುವ ಎಲ್ಲಾ ಅರ್ಹತೆ ಹೊಂದಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಅಭಿಪ್ರಾಯಪಟ್ಟರು.
ರಾಜಘಟ್ಟದಲ್ಲಿ ನಡೆಯಲಿರುವ ಬೌದ್ಧ ನೆಲೆಯ ಉತ್ಖನನ ಕುರಿತು ಮಂಗಳವಾರ ಬುದ್ಧನ ಅನುಯಾಯಿಗಳು,ಸಾಹಿತಿಗಳು,ಪತ್ರಕರ್ತರು ಹಾಗೂ ಸಂಶೋಧಕರ ಸಭೆಯಲ್ಲಿ ಅವರು ಮಾತನಾಡಿದರು.
ರಾಜಘಟ್ಟದಲ್ಲಿ ಉತ್ಖನನ ನಡೆದ ಇಪ್ಪತ್ತು ವರ್ಷಗಳ ನಂತರ ಎಚ್ಚೆತ್ತಿದ್ದೇವೆ.ಉತ್ಖನನದ ರೂವಾರಿಗಳಾದ ಮೈಸೂರಿನ ಕೃಷ್ಣಮೂರ್ತಿ ಅವರು ಈ ಬಗ್ಗೆ ಹೆಚ್ಚು ಕಾಳಜಿ ವಹಿಸಿದ್ದಾರೆ. ಮಳೆಗಾಲವಾದ್ದರಿಂದ ಉತ್ಖನನ ಕಾರ್ಯ ಸ್ಥಗಿತವಾಗಿದೆ ಎಂದರು.
ಎರಡೂವರೆ ಸಾವಿರ ವರ್ಷಗಳ ಹಿಂದಿನ ಬೌದ್ಧ ನೆಲೆ ಇದಾಗಿದ್ದು, ಇಲ್ಲಿನ ಅವಶೇಷಗಳನ್ನು ಪರಿಶೀಲಿಸಿದರೆ ಗ್ರೀಕ್ ನಾಗರೀಕತೆ ನೆನಪಾಗುತ್ತದೆ. ಬೌದ್ಧ ಧಮ್ಮ ಉಚ್ರಾಯ ಸ್ಥಿತಿಯಲ್ಲಿ ಇದ್ದ ಕುರುಹುಗಳನ್ನು ಇಲ್ಲಿ ಕಾಣಬಹುದಾಗಿದೆ ಎಂಬುವುದು ಸಂಶೋಧಕರ ಅಭಿಪ್ರಾಯವಾಗಿದೆ ಎಂದರು.
ಉತ್ಖನನ ಮುಂದುರೆಸಲು ಬೌದ್ಧ ಅವಶೇಷಗಳು ಎಷ್ಟು ಎಕರೆ ಪ್ರದೇಶದಲ್ಲಿದೆ ಎಂಬ ಬಗ್ಗೆ ನಿಖರವಾದ ಮಾಹಿತಿ ಬೇಕು. ಒಂದು ಅಂದಾಜಿನ ಪ್ರಕಾರ ಸುಮಾರು ನೂರು ಎಕರೆ ಪ್ರದೇಶದಲ್ಲಿ ಹಬ್ಬಿಕೊಂಡಿರಬಹುದು ಎಂಬ ಮಾಹಿತಿ ಇದೆ. ಇದನ್ನು ತಜ್ಞರು ನಿರ್ಧಾರ ಮಾಡುತ್ತಾರೆ ಈ ಕಾರ್ಯದಲ್ಲಿ ಮಹಾಬೋಧಿ ಸೊಸೈಟಿ ಕೈ ಜೋಡಿಸಬೇಕು ಎಂದರು.
2002ರಲ್ಲಿ ನಡೆದ ಉತ್ಖನನದಲ್ಲಿ ದೊರೆತ ವಸ್ತುಗಳನ್ನು ಮೈಸೂರಿನ ಪ್ರಾಚ್ಯವಸ್ತು ಸಂಶೋಧನಾಲಯದಲ್ಲಿ ಇಡಲಾಗಿದೆ. ಇವುಗಳನ್ನು ಇಲ್ಲಯೇ ವಸ್ತು ಸಂಗ್ರಹಾಲಯ ನಿರ್ಮಿಸಿ ಸಂಗ್ರಹಿಸಬೇಕಿದೆ. ಈ ಹಿಂದೆ ರೈತರು ಬೂದಿ ಹಳ್ಳದಿಂದ ಬೂದಿ ತೆಗೆಯುವಾಗ ಸಿಕ್ಕ ಕೆಲವು ವಸ್ತುಗಳನ್ನು ಸುತ್ತಮುತ್ತಲಿನ ಗ್ರಾಮಗಳ ರೈತರು ಅವರ ಮನೆಗಳಲ್ಲಿ ಇಟ್ಟುಕೊಂಡಿರುವ ಮಾಹಿತಿ ಇದೆ. ಸರ್ಕಾರ ಇಲ್ಲಿಯೇ ವಸ್ತು ಸಂಗ್ರಹಾಲಯ ಮಾಡಿದರೆ ರೈತರು ತಮ್ಮ ಬಳಿ ಇರುವ ವಸ್ತುಗಳನ್ನು ತಂದು ಇಡುತ್ತಾರೆ. ಅವರ ಮನವೊಲಿಸುವ ಕೆಲಸ ಮಾಡಬೇಕು. ಉತ್ಖನನ ಮಾಡಿದ ಸ್ಥಳವನ್ನು ಸಾರ್ವಜನಿಕರ ವೀಕ್ಷಣೆಗೆ ಬಿಡಬೇಕು ಮತ್ತು ಉತ್ಖನನ ಪೂರ್ಣಗೊಳಿಸಬೇಕು.ಹಾಗೆ ಮಾಡಿದರೆ ರಾಜಘಟ್ಟ ಭಾರತದ ಭೂಪಟದಲ್ಲಿ ಬಹಳ ಮುಖ್ಯವಾದ ಕೇಂದ್ರ ಸ್ಥಾನವಾಗಲಿದೆ ಎಂದರು.
ಉತ್ಖನನದ ಉದ್ದೇಶದಿಂದ ರೈತರನ್ನು ಬೀದಿಪಾಲು ಮಾಡಲು ಸಾಧ್ಯವಿಲ್ಲ. ಸರ್ಕಾರ ಕಾರ್ಖಾನೆಯ ಉದ್ದೇಶಕ್ಕೆ ಭೂ ಸ್ವಾಧೀನ ಮಾಡಿಕೊಂಡಂತೆ ಬೌದ್ಧ ನೆಲೆಗೆ ಭೂಮಿ ಖರೀದಿ ಮಾಡಬೇಕು. ಸರ್ಕಾರ ರೈತರಿಗೆ ಪರ್ಯಾಯ ಭೂಮಿ ನೀಡಿ ಸೂಕ್ತ ಪರಿಹಾರ ನೀಡಬೇಕು. ರಾಜಘಟ್ಟದ ಸುತ್ತ ಸರ್ಕಾರಿ ಭೂಮಿ ಇದ್ದರೆ ಅದನ್ನು ರಕ್ಷಣೆ ಮಾಡಬೇಕು. ಇದು ಪವಿತ್ರ ಬೌದ್ಧನೆಲೆಯಾಗಿರುವ ಕಾರಣಕ್ಕೆ ಇದನ್ನು ಉಳಿಸಿಕೊಂಡು ರಾಜಘಟ್ಟವನ್ನು ಒಂದು ಅಂತರ ರಾಷ್ಟ್ರೀಯ ಬೌದ್ಧ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದರು.
ರಾಜಘಟ್ಟ ನಾಲ್ಕು, ಐದನೇ ಶತಮಾನದಲ್ಲೇ ಅಂತರ ರಾಷ್ಟ್ರೀಯ ಬೌದ್ಧ ಕೇಂದ್ರವಾಗಿತ್ತು. ವಿಶ್ವದ ಇತರ ದೇಶಗಳಿಗೆ ಬೌದ್ಧ ಧಮ್ಮ ಪ್ರಚಾರಕ್ಕೆ ಬಿಕ್ಕುಗಳು ರಾಜಘಟ್ಟದಿಂದ ಹೋಗುತ್ತಿದ್ದರು. ಮಂಟೇಸ್ವಾಮಿ ಅಲ್ಲಮನ ಪ್ರತಿರೂಪವಾಗಿದ್ದು, ಬುದ್ಧನ ಮುಂದುವರೆದ ರೂಪವಾಗಿದೆ. ಹಾಗಾಗಿ ಗತಿಸಿರುವ ಇತಿಹಾಸವನ್ನು ಮರುಕಳಿಸುವ ಕೆಲಸ ಮಾಡಬೇಕಿದೆ ಎಂದು ಸಾಹಿತಿ ಪ್ರೊ.ಎಚ್.ಗೋವಿಂದಯ್ಯ ಸಲಹೆ ಮಾಡಿದರು.
ರಾಜಘಟ್ಟದ ಸುತ್ತಮುತ್ತ ಸುಮಾರು ನೂರಕ್ಕೂ ಹೆಚ್ಚು ವೀರಗಲ್ಲುಗಳಿವೆ.ಆ ಪ್ರದೇಶವನ್ನು ನರೇಂದ್ರಭೂಪಾಲ ಎಂಬ ರಾಜ ಆಳಿದ್ದ ಮಾಹಿತಿ ವೀರಗಲ್ಲುಗಳಲ್ಲಿದೆ. ಬೌದ್ಧ ರಾಜರು ದೆಹಲಿಯ ರಾಜಘಾಟ್ ನಿಂದ ವಲಸೆ ಬಂದು ಇಲ್ಲಿ ನೆಲೆಸಿದ್ದರು ಎಂದು ಸಂಶೋಧಕ ಡಾ.ವೆಂಕಟೇಶ್ ಹೇಳಿದರು.
ರಾಜಘಟ್ಟ ಬೌದ್ಧ ಸ್ಮಾರಕ ಸಮಿತಿ ಸಂಚಾಲಕರಾಗಿ ಕೆ.ಎಚ್.ರಾಜೇಂದ್ರ, ಡಾ.ಪ್ರಕಾಶ್ ಮಂಟೇದ, ರಾಜು ಸಣ್ಣಕ್ಕಿ, ಸಂಶೋಧಕ ಡಾ.ವೆಂಕಟೇಶ್ ಅವರನ್ನು ನೇಮಕ ಮಾಡಲಾಯಿತು.
ನ್ಯಾನಲೋಕ ಬಂತೇಜಿ, ಗೋಪಾಲಕೃಷ್ಣ, ಮಾ.ಮುನಿರಾಜು, ಕಂಟನಕುಂಟೆ ಕೃಷ್ಣಮೂರ್ತಿ, ಸಾಹಿತಿ ಚಿನ್ನು ಪ್ರಕಾಶ್, ರಾಜಗೋಪಾಲ್, ಗೂಳ್ಯ ಹನುಮಣ್ಣ, ಮಾಳವ ನಾರಾಯಣ, ರಮೇಶ್ ಸಂಕ್ರಾಂತಿ, ವಕೀಲರಾದ ಸಿದ್ದಾರ್ಥ,ರಾಜಘಟ್ಟ ಒಬಳೇಶ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.