ADVERTISEMENT

ಅತ್ಯಾಚಾರ, ಹತ್ಯೆ: ಸಾಂತ್ವನ ಸಾಲದು ಗಲ್ಲು ಶಿಕ್ಷೆಯಾಗಲಿ

ಭಾರತ ಜನ ಜಾಗೃತಿ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಮುನಿಯಪ್ಪ ಬಲವಾದಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2019, 19:45 IST
Last Updated 3 ಡಿಸೆಂಬರ್ 2019, 19:45 IST
ಸಿ.ಮುನಿಯಪ್ಪ ಬಲವಾದಿ
ಸಿ.ಮುನಿಯಪ್ಪ ಬಲವಾದಿ   

ದೇವನಹಳ್ಳಿ: ‘ತೆಲಂಗಾಣ ರಾಜ್ಯದ ಪಶು ವೈದ್ಯೆ ಮೆಳಿನ ಅತ್ಯಾಚರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಸರ್ಕಾರ ಕುಟುಂಬಕ್ಕೆ ಸಾಂತ್ವನ ಹೇಳುವ ಬದಲು ಆರೋಪಿಗಳನ್ನು ಗಲ್ಲಿಗೇರಿಸಬೇಕು’ ಎಂದು ಭಾರತ ಜನ ಜಾಗೃತಿ ಸೇನೆ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಸಿ.ಮುನಿಯಪ್ಪ ಬಲವಾದಿ ಒತ್ತಾಯಿಸಿದರು.

ಇಲ್ಲಿನ ಗುರುಭವನದ ಆವರಣದಲ್ಲಿ ಮಾತನಾಡಿದ ಅವರು, ‘ಘಟನೆ ನಡೆದು ನಾಲ್ಕೈದು ದಿನಗಳಾದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಪೊಲೀಸರು ವಿಳಂಬ ಮಾಡಿರುವುದು ಅನುಮಾನಕ್ಕೆ ಕಾರಣವಾಗಿದೆ. ಸಾಮೂಹಿಕ ಅತ್ಯಾಚಾರ ಎಸಗಿ ಹತ್ಯೆ ಮಾಡಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಹದ್ದು. ಆರೋಪಿಗಳು ಯಾವುದೇ ಒತ್ತಡ ತಂದರೂ ಮಣಿಯದೆ ಪೊಲೀಸರು ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದ ರಾಜಧಾನಿ ದೆಹಲಿಯ ನಿರ್ಭಯಾ ಪ್ರಕರಣದ ಬಗ್ಗೆ ನ್ಯಾಯಾಲಯದ ತೀರ್ಪು ಬಂದಿಲ್ಲ.ದೇಶದೆಲ್ಲೆಡೆ ನಿರ್ಭಯಾ ಪ್ರಕರಣದ ಹೋರಾಟದಿಂದ ಸೂಕ್ತ ಕ್ರಮ ಕೈಗೊಳ್ಳಬಹುದು, ಮಹಿಳೆಯರ ಮೇಲಿನ ಅತ್ಯಾಚಾರ, ಕೊಲೆ ಮತ್ತು ದೌರ್ಜನ್ಯ ಕಡಿಮೆಯಾಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಹೇಳಿದರು.

ADVERTISEMENT

‘ಕೇಂದ್ರ ಸರ್ಕಾರ ಮಹಿಳಾ ಸುರಕ್ಷತೆಗೆ ಸಂಬಂಧಿಸಿದ ವಿವಿಧ ಯೋಜನೆಗಳನ್ನು ಕೈಗೊಳ್ಳಲು 2015ರಿಂದ 2018ರ ಅವಧಿಯಲ್ಲಿ ನೂರಾರು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿದೆ. ಅನುದಾನವನ್ನು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಬಳಸಿಕೊಂಡಿದ್ದರೂ ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ನಿರ್ಲಕ್ಷ್ಯತೆ ಮುಂದುವರೆದಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಹತ್ತಾರು ಲೀಟರ್ ಪೆಟ್ರೋಲ್ ಅನ್ನು ಗ್ರಾಹಕರಿಗೆ ಕ್ಯಾನ್‌ನಲ್ಲಿ ನೀಡಲು ಅವಕಾಶವಿಲ್ಲ. ಪೊಲೀಸರು ಸಕಾಲದಲ್ಲಿ ರಕ್ಷಣೆಗೆ ಮುಂದಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರದರ್ಶಕ, ಸಮಗ್ರ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.