ಹೊಸಕೋಟೆ: ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆ ಹಿರಿಯರಿಗೆ ಗೌರವ ನೀಡುವುದು ಕಡಿಮೆಯಾಗುತ್ತಿದೆ. ಎಲ್ಲೋ ಇರುವ ದೇವಸ್ಥಾನಕ್ಕೆ ಹೋಗಿ ಕೈಮುಗಿದು ಬರುವ ಜನರು ಕಣ್ಣ ಮುಂದೆ ಇರುವ ತಂದೆ–ತಾಯಿಗೆ ಗೌರವ ನೀಡುವುದಿಲ್ಲ. ಇನ್ನೆಲ್ಲಿ ಅವರ ಜೀವನಕ್ಕೆ ಸಾರ್ಥಕತೆ ಸಿಗುತ್ತದೆ ಎಂದು ಹಿರಿಯಯ ಸಿವಿಲ್ ನ್ಯಾಯಾಧೀಶ ಜಿ.ಅರುಣ್ ಕುಮಾರ್ ಹೇಳಿದರು.
ನಗರದ ಪೊಲೀಸ್ ಠಾಣೆಯ ಆವರಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ ಹಾಗೂ ಹೊಸಕೋಟೆ ಪೊಲೀಸ್ ಉಪ ವಿಭಾಗ ಸಹಯೋಗದಲ್ಲಿ ನಡೆದ ಹಿರಿಯ ನಾಗರಿಕ ದಿನಾಚರಣೆಯಲ್ಲಿ ಮಾತನಾಡಿದರು.
ಹಿರಿಯರ ಕೊಡುಗೆಯನ್ನು ಯಾರು ಎಂದಿಗೂ ಮರೆಯಬಾರದು, ವಯಸ್ಸಾದ ಬಳಿಕ ಸಹಜವಾಗಿಯೇ ಮನುಷ್ಯನಿಗೆ ಆರೋಗ್ಯ ಸಮಸ್ಯೆ ಹಾಗೂ ಸಾಮಾಜಿಕ ಒಂಟಿತನ ಕಾಡುತ್ತದೆ. ಅಂತಹದ್ದರಲ್ಲಿ ಅವರ ಮೇಲೆ ದೌರ್ಜನ್ಯ ನಡೆಸದೆ ನೈತಿಕತೆಯಿಂದ ನಡೆದುಕೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ ಎಂದು ಹೊಸಕೋಟೆ ಪೊಲೀಸ್ ಉಪ ಅಧೀಕ್ಷಕ ಎಂ. ಮಲ್ಲೇಶ್ ಹೇಳಿದರು.
ಹಿರಿಯರನ್ನು ಸಹಾನುಭೂತಿ ಅಥವಾ ಕರುಣೆಯಿಂದ ನೋಡದೆ ಅವರೊಟ್ಟಿಗೆ ಪ್ರೀತಿ, ವಾತ್ಸಲ್ಯದಿಂದ ಯುವ ಪೀಳಿಗೆ ಇದ್ದರೆ ಅವರಿಗೆ ಮಾನಸಿಕ ಕಿನ್ನತೆ, ಕಾಯಿಲೆ ಇದ್ದರೂ ಅದು ಕ್ಷಣಾರ್ಧಕ್ಕೆ ದೂರವಾಗಿಸುವ ಸಾಧ್ಯತೆ ಇರುತ್ತದೆ ಎಂದು ಹೊಸಕೋಟೆ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಗೋವಿಂದ್ ಬಿ.ಟಿ ತಿಳಿಸಿದರು.
ಹೊಸಕೋಟೆ ತಾಲ್ಲೂಕು ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ಪ, ವಕೀಲರ ಸಂಘದ ಖಂಜಾಚಿ ಜೈ ರಾಮ್, ಜಂಟಿ ಕಾರ್ಯದರ್ಶಿ ಆನಂದ, ಎಂ.ರುಕ್ಮಿಣಿ, ಸಿ. ಮುನಿಯಪ್ಪ, ಶಾಂತಾರಾಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.