ಆನೇಕಲ್: ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದಿಂದಾಗಿ ಹುತಾತ್ಮರಾದ ಭಾರತೀಯ ಯೋಧರಿಗೆ ಪಟ್ಟಣದ ಯುವ ವಕೀಲರು, ವಿವಿಧ ಕಾಲೇಜಿನ ವಿದ್ಯಾರ್ಥಿಗಳು ನಮನ ಸಲ್ಲಿಸಿದರು. ಯುದ್ಧದಲ್ಲಿ ವೀರಮರಣ ಹೊಂದಿದ ಯೋಧರ ಭಾವಚಿತ್ರ ಹಿಡಿದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಅಮರ್ ಜವಾನ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು.
ವಕೀಲ ಆರ್.ಎಸ್.ಸತೀಶ್ ಮಾತನಾಡಿ, ಗಡಿಯಲ್ಲಿ ಯೋಧರ ಪರಿಶ್ರಮದಿಂದಾಗಿ ನಾವೆಲ್ಲರೂ ನೆಮ್ಮದಿಯಾಗಿ ಜೀವನ ನಡೆಸುತ್ತಿದ್ದೇವೆ. ಪಾಕಿಸ್ತಾನ ಕುತಂತ್ರದಿಂದಾಗಿ ಭಾರತದ ಯೋಧರು ವೀರ ಮರಣ ಹೊಂದುವಂತಾಯಿತು. ಪಾಕಿಸ್ತಾನದ ಕುತಂತ್ರಕ್ಕೆ ಭಾರತೀಯ ಯೋಧರು ತಕ್ಕ ಉತ್ತರ ನೀಡುತ್ತಿದ್ದಾರೆ ಎಂದರು.
ವಕೀಲ ಪುರುಷೋತ್ತಮ್ ಮಾತನಾಡಿ, ಯೋಧರ ಬಲಿದಾನ ಎಂದಿಗೂ ವ್ಯರ್ಥವಾಗಬಾರದು. ಹಾಗಾಗಿ ಭಾರತೀಯ ಸೇನೆ ದಿಟ್ಟ ಉತ್ತರ ನೀಡುವ ಮೂಲಕ ಪಾಕಿಸ್ತಾನಕ್ಕೆ ಸಂದೇಶ ರವಾನಿಸುವ ಅವಶ್ಯವಿದೆ. ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಭಾರತೀಯ ಸೇನೆ ಬಗ್ಗೆ ಜಾಗೃತಿ ಮೂಡಿಸಲಾಗಿದೆ ಎಂದರು.
ವಕೀಲರಾದ ಜಗನ್ನಾಥ್, ಶಿವರಾಜು ಮುತ್ಸಂದ್ರ, ಆರ್.ವಿ.ಮೂರ್ತಿ, ಎ.ಜಿ.ರಾಜು, ಶಿವರಾಜು ಮುತ್ಸಂದ್ರ, ಆಶಾ, ಶರತ್ ರಾಜ್, ನಿರ್ಮಲ, ರಾಕಿ, ಗೋಪಾಲರಾಜು ಕಾಲೇಜಿನ ಉಪನ್ಯಾಸಕಿ ಹೇಮಾ, ಕೋಕಿಲಾ, ರಾಮಕೃಷ್ಣ, ಲಕ್ಷ್ಮಿ ಸಂಪತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.