ADVERTISEMENT

ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳಾಗಲಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2021, 3:54 IST
Last Updated 16 ಫೆಬ್ರುವರಿ 2021, 3:54 IST
ತಾಲ್ಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್‌ ಜಯಂತಿ ನಡೆಯಿತು
ತಾಲ್ಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್‌ ಜಯಂತಿ ನಡೆಯಿತು   

ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ತಾಲ್ಲೂಕು ಕಚೇರಿಯಲ್ಲಿ ಸಂತ ಸೇವಾಲಾಲ್‌ ಜಯಂತಿ ಆಚರಿಸಲಾಯಿತು.

ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಜನರ ಒಳಿತಿಗಾಗಿ ಪವಾಡ ಪುರುಷರಾಗಿ ಅವತರಿಸಿದ ಸಂತ ಸೇವಾಲಾಲ್‌ ಅವರಂತಹ ಮಹನೀಯರು ಆದರ್ಶವಾಗಬೇಕು. ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆ ಗುರುತಿಸಿಕೊಳ್ಳಲು ಮಹಾನುಭಾವರ ಸತ್ಕಾರ್ಯ ಕಾರಣವಾಗಿವೆ. ಸರ್ಕಾರದ ಸೌಲಭ್ಯ ಬಳಸಿಕೊಂಡು ಹಿಂದುಳಿದ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕಿದೆ. ಬಂಜಾರ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ಶಾಸಕನಾದ ಮೇಲೆ ಹಿಂದುಳಿದ ವರ್ಗಗಳಿಗೆ ಹಲವು ಜನಪರ ಕಾರ್ಯ ಮಾಡಲಾಗಿದೆ. ಹಿಂದುಳಿದ ಸಮುದಾಯಗಳಿಗೆ ವಿಶೇಷ ಅನುದಾನ ನೀಡಲಾಗಿದೆ ಎಂದರು.

ಬಂಜಾರ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ರಾಮಾನಾಯ್ಕ ಮಾತನಾಡಿ, ಲಂಬಾಣಿಗರಲ್ಲಿ ಸೇವಾಲಾಲ್ ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಅಧ್ಯಾತ್ಮ ಅಪ್ಪಿಕೊಂಡು, ತನ್ನ ಜನಾಂಗದ ಸೇವೆ ಮಾಡಿದ ಮಹಾನ್ ಹಿತಚಿಂತಕ. ಸರ್ಕಾರ ಜಯಂತಿ ಆಚರಿಸುವುದರೊಂದಿಗೆ ಈ ಸಮುದಾಯಕ್ಕೆ ಸಲ್ಲಬೇಕಾದ ಸಾ
ಮಾಜಿಕ ನ್ಯಾಯ ನೀಡಬೇಕು ಎಂದರು.

ADVERTISEMENT

ತಾಲ್ಲೂಕಿನಲ್ಲಿ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ಮೀಸಲಾತಿಗೆ ಧಕ್ಕೆ ತಾರದಂತೆ ಸಮುದಾಯದ ಸಮಗ್ರ ಅಭಿವೃದ್ಧಿಗೆ ಸರ್ಕಾರ ನೆರವು ನೀಡಬೇಕು ಎಂದು ಮುಖಂಡರು ಮನವಿ ಮಾಡಿದರು.

ತಹಶೀಲ್ದಾರ್ ಟಿ.ಎಸ್.ಶಿವರಾಜ್,ಉಪತಹಶೀಲ್ದಾರ್ ಸುರೇಶ್, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ ಸೋಮಶೇಖರ್, ಗ್ರಾಮ ಲೆಕ್ಕಾಧಿಕಾರಿ ರಾಜೇಂದ್ರಬಾಬು,ಬಂಜಾರ ಸೇವಾ ಸಂಘದ ತಾಲ್ಲೂಕು ಅಧ್ಯಕ್ಷ ಸಿದ್ದಾ ನಾಯಕ್, ಉಪಾಧ್ಯಕ್ಷ ಶಿವಶಂಕರ್,ಕಾರ್ಯದರ್ಶಿ ಗೋವಿಂದನಾಯಕ್, ತಾಲ್ಲೂಕು ಬಂಜಾರ ನೌಕರರ ಸಂಘದ ಅಧ್ಯಕ್ಷ ಲೋಕೇಶ್‌ನಾಯಕ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.