ದೇವನಹಳ್ಳಿ: ಅಲ್ಪ ನೀರಿನಲ್ಲೇ ರೈತನೊಬ್ಬ ಹಸಿರು ಮನೆ ನಿರ್ಮಿಸಿ ಕ್ಯಾಪ್ಸಿಕಮ್ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಮಳೆಗಾಲದಲ್ಲೇ ಕೊಳವೆ ಬಾವಿಗಳಲ್ಲಿ ನೀರಿಲ್ಲ. ಇಂತಹ ಬರ ಸ್ಥಿತಿಯಲ್ಲಿ ತಾಲ್ಲೂಕಿನ ಕೆ.ಹೊಸೂರು ಗ್ರಾಮದ ರೈತ ಎಚ್.ಎಂ ರವಿಕುಮಾರ್ ಧೈರ್ಯದಿಂದ ಪಾಲಿಹೌಸ್ ನಿರ್ಮಾಣ ಮಾಡಿ ಹನಿ ನೀರಾವರಿ ಪದ್ಧತಿ ಮೂಲಕ ಕ್ಯಾಪ್ಸಿಕಮ್ ಬೆಳೆದಿದ್ದಾರೆ. ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಜಿ.ಮಂಜುನಾಥ್ ಇವರಿಗೆ ಮಾರ್ಗದರ್ಶನ ಮಾಡಿದ್ದಾರೆ.
‘ಕೃಷಿಭಾಗ್ಯ ಯೋಜನೆಯಡಿ ಹಸಿರು ಮನೆ ನಿರ್ಮಾಣಕ್ಕೆ ಆರ್ಜಿ ಹಾಕಿದೆ. ಸರ್ಕಾರದ ನಿಗದಿಯಂತೆ ಎಂಟು ಫಲಾನುಭವಿಗಳಿಗೆ ಮಾತ್ರ ಒಂದು ತಾಲ್ಲೂಕಿಗೆ ಅವಕಾಶವಿತ್ತು. 16 ರೈತರ ಆರ್ಜಿ ಸಲ್ಲಿಕೆಯಾಗಿತ್ತು. ಅನಿರ್ವಾಯವಾಗಿ ಲಾಟರಿ ಮೂಲಕ ನನಗೆ ಸಿಕ್ಕಿತು’ ಎಂದು ರೈತ ರವಿಕುಮಾರ್ ಹೇಳಿದರು.
ಒಂದು ಎಕರೆಯಲ್ಲಿ ಹಸಿರು ಮನೆ ನಿರ್ಮಾಣಕ್ಕೆ ಸರ್ಕಾರ ನೀಡಿದ್ದು ₹ 32ಲಕ್ಷ ಶೇ 50ರಷ್ಟು ಅಂದರೆ ₹ 15.68 ಲಕ್ಷ ರಿಯಾಯಿತಿ ಸಿಕ್ಕಿದೆ. ಒಂದು ಕ್ಯಾಪ್ಸಿಕಮ್ ಸಸಿಗೆ ₹ 8.5ರಂತೆ ಒಂದು ಎಕರೆಗೆ 11.5 ಸಾವಿರ ಸಸಿ ನೆಡಲಾಗಿದೆ. ₹ 75ಸಾವಿರ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಲಾಗಿದೆ ಎಂದು ಮಾಹಿತಿ ಹಂಚಿಕೊಂಡರು.
ಪಾಲಿಹೌಸ್ನಲ್ಲಿ ಬೆಳೆದಿರುವ ಕ್ಯಾಪ್ಸಿಕಮ್ 180ಗ್ರಾಂ ನಿಂದ 230 ಗ್ರಾಂವರೆಗೆ ತೂಕ ಇದೆ. ಈಗಾಗಲೇ ಎಂಟು ಟನ್ ಕೊಯ್ಲು ಮಾಡಲಾಗಿದೆ. ಪ್ರತಿ ಕೆ.ಜಿ.ಗೆ ₹ 54 ರೂಪಾಯಿ ಇದೆ. ಇಲ್ಲಿನ ಕ್ಯಾಪ್ಸಿಕಮ್ಯನ್ನು ಕೋಲಾರದ ವಹಿವಾಟು ಏಜೆನ್ಸಿ ಮೂಲಕ ಪಶ್ಚಿಮ ಬಂಗಾಳಕ್ಕೆ ರಫ್ತು ಮಾಡಲಾಗುತ್ತಿದೆ ಎನ್ನುತ್ತಾರೆ ರವಿಕುಮಾರ್.
ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ತೋಟಗಾರಿಕೆ ಬೆಳೆಗಾರರಿಗೆ ಅನೇಕ ರೀತಿಯ ಸೌಲಭ್ಯಗಳಿವೆ. ರವಿಕುಮಾರ್ ಮನವೊಲಿಸಿ ಕ್ಯಾಪ್ಸಿಕಮ್ ಬೆಳೆಯಲಾಗಿದೆ. ಇದರಿಂದ ಅವರ ಆದಾಯವೂ ಹೆಚ್ಚಾಗಿದೆ ಎನ್ನುತ್ತಾರೆ ತಾಲ್ಲೂಕು ತೋಟಗಾರಿಕೆ ಇಲಾಖೆ ಹಿರಿಯ ನಿರ್ದೇಶಕ ಜಿ.ಮಂಜುನಾಥ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.