ದೇವನಹಳ್ಳಿ: ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಸಾದಹಳ್ಳಿ ಟೋಲ್ನ ಜಂಕ್ಷನ್ ಬಳಿಯಲ್ಲಿ ನೂತನವಾಗಿ ಮೇಲ್ಸೇತುವ ನಿರ್ಮಿಸುವ ಯೋಜನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಸಿರು ನಿಶಾನೆ ತೋರಿದೆ.
ಈ ಮೊದಲು ಇಲ್ಲಿ ಕೆಳ ಸೇತುವೆ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ವಿಮಾನ ನಿಲ್ದಾಣದಿಂದ 7 ಕಿ.ಮೀ ದೂರದಲ್ಲಿರುವ ಸಾದಹಳ್ಳಿ ಜಂಕ್ಷನ್ ಹತ್ತಿರ ಮೆಟ್ರೋ ಹಾದು ಹೋಗಲಿದೆ. ಈ ಹಿನ್ನೆಲೆಯಲ್ಲಿ ಟ್ರಾಫಿಕ್ ಕಿರಿ ಕಿರಿ ತಪ್ಪಿಸಲು ಯೋಜನೆ ಬದಲಾವಣೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೊಸ ಯೋಜನೆಯಿಂದ ಮೆಟ್ರೋ ರೈಲು ಮಾರ್ಗಕ್ಕೂ ಯಾವುದೇ ತೊಂದರೆಯಾಗದ ಹಿನ್ನಲೆಯಲ್ಲಿ ಮೇಲ್ಸೇತುವೆ ಕಾಮಗಾರಿಗೆ ಬೆಂಗಳೂರು ಮೇಟ್ರೋ ಪ್ರಾಧಿಕಾರ (ಬಿಎಂಆರ್ಸಿಎಲ್) ಒಪ್ಪಿಗೆ ಸೂಚಿಸಿದ್ದು, ಮುಂದಿನ 3 ತಿಂಗಳೊಳಗೆ ಮೇಲ್ಸೇತುವ ನಿರ್ಮಾಣ ಕಾಮಗಾರಿಗೆ ಪ್ರಾರಂಭವಾಗಲಿದೆ. ಯೋಜನೆ ಪೂರ್ಣಗೊಳಿಸಲು ಡಿ.2024ರ ಗಡುವು ನೀಡಲಾಗಿದೆ. 2 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆಯನ್ನು ಎನ್ಎಚ್ಎಐ ಅಧಿಕಾರಿಗಳು ನೀಡಿದ್ದಾರೆ.
ಈಗಾಗಲೇ ಕೇಳ ಸೇತುವೆಗೆ ಟೆಂಡರ್ ಅಂತಿಮಗೊಂಡ ಹಿನ್ನಲೆಯಲ್ಲಿ ಬದಲಾದ ಯೋಜನೆಯಿಂದ ಮೇಲ್ಸೇತುವೆ ಕೆಲಸವನ್ನೂ ಗುತ್ತಿಗೆ ಪಡೆದ ಅಂಥಾಂಗ್ ಇನ್ಫ್ರಾಸ್ಟ್ರಕ್ಚರ್ ಪ್ರೈವೆಟ್ ಲಿಮಿಟೆಡ್ ಕಾಮಗಾರಿಯನ್ನು ಪ್ರಾರಂಭಿಸಲಿದೆ. ಮೇಲ್ಸೇತುವೆಯೂ 500 ಮೀಟರ್ ಉದ್ದ ಇರಲಿದ್ದು, ಸುಗಮ ವಾಹನ ಸಂಚಾರಕ್ಕೆ ದೇವನಹಳ್ಳಿ, ವಿಮಾನ ನಿಲ್ದಾಣದ ವಾಹನ ಪ್ರಯಾಣಿಕರಿಗೆ ಅನುಕೂಲವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.