ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರ ಅಹೋರಾತ್ರಿ ಧರಣಿ 74ನೇ ದಿನಕ್ಕೆ ಕಾಲಿಟ್ಟಿದ್ದು, ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಪದಾಧಿಕಾರಿಗಳು ಭೇಟಿ ನೀಡಿ ರೈತರಿಗೆ ಬೆಂಬಲ ನೀಡಿದರು.
ಭಾರತೀಯ ಕಿಸಾನ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಾಯಿರೆಡ್ಡಿ ಮಾತನಾಡಿ, ರೈತರ ಭೂಸ್ವಾಧೀನ ವಿರುದ್ಧದ ಹೋರಾಟ ರಾಜ್ಯ ಮಟ್ಟದ ಹೋರಾಟವಾಗುವುದರ ಜೊತೆಗೆ ರಾಷ್ಟ್ರ ಮಟ್ಟದ ಹೋರಾಟವಾಗಬೇಕು. ಭಾರತೀಯ ಕಿಸಾನ್ ಸಂಘದಿಂದ ರಾಷ್ಟ್ರ ಮಟ್ಟದ ಹೋರಾಟ ರೂಪಿಸಲಾಗುವುದು ಎಂದು ತಿಳಿಸಿದರು.
ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವುದರಿಂದ ರೈತರಿಗೆ ಹೆಚ್ಚು ನಷ್ಟವಾಗಲಿದೆ. ಕೈಗಾರಿಕೆಗಳ ಸ್ಥಾಪನೆಯಿಂದ ಅಂತರ್ಜಲ ಕಲುಷಿತವಾಗುತ್ತದೆ. ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತದೆ. 74 ದಿನಗಳಿಂದಲೂ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರ ಈ ಬಗ್ಗೆ ಕ್ರಮ ವಹಿಸಿ ಭೂಸ್ವಾಧೀನ ಪ್ರಕ್ರಿಯೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.
ಭೂಸ್ವಾಧೀನದಲ್ಲಿ ರೈತರ ಒಪ್ಪಿಗೆ ಅತ್ಯಂತ ಮುಖ್ಯವಾಗಿದೆ. ಈ ಭಾಗದಲ್ಲಿ ರೈತರ ಜಮೀನುಗಳನ್ನು ದೌರ್ಜನ್ಯದಿಂದ ರೈತರ ಭೂಮಿ ಕಬಳಿಸುತ್ತಿದ್ದಾರೆ. ನಾವೇ ಮತ ನೀಡಿ ಗೆಲ್ಲಿಸಿದ ಸರ್ಕಾರ ನಮ್ಮ ಭೂಮಿ ಕಿತ್ತುಕೊಳ್ಳುತ್ತಿದೆ. ಮಳೆ ಗಾಳಿಯೆನ್ನದೇ ರೈತರು ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಕ್ಕೆ ಯಶಸ್ಸು ಖಚಿತ ಎಂದರು.
ಸ್ತ್ರೀಶಕ್ತಿ ಜಾಗೃತವಾಗಬೇಕು, ಮನೆಗಳನ್ನು ನೋಡಿಕೊಳ್ಳುವ ಮಹಿಳೆಯು ಹೋರಾಟಕ್ಕೆ ನಿಂತರೇ ಗೆಲುವು ಸಾಧಿಸುವವರಿಗೂ ಮಹಿಳೆ ಹಿಂದೆ ಸರಿಯುವುದಿಲ್ಲ. ರೈತ ಹೋರಾಟದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದಾರೆ. ರೈತ ಹೋರಾಟದ ಸಂಘಟನೆಯಲ್ಲಿ ಮಹಿಳೆಯರು ಕ್ರಿಯಾಶೀಲರಾಗಿ ತೊಡಗಿಕೊಳ್ಳಬೇಕು ಎಂದು ಭಾರತೀಯ ಕಿಸಾನ್ ಸಂಘದ ಮಹಿಳಾ ಘಟಕದ ಅಮೃತ ಹೇಳಿದರು.
ಭಾರತೀಯ ಕಿಸಾನ್ ಸಂಘದ ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ನಾರಾಯಣಸ್ವಾಮಿ, ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯ ಚಿನ್ನಪ್ಪ ಚಿಕ್ಕಹಾಗಡೆ, ರಾಮಚಂದ್ರರೆಡ್ಡಿ ಇದ್ದರು.
ಕೈಗಾರಿಕೆಗೆ ಜಮೀನು;
ಭೂಮಿ ಮೇಲಿನ ದೌರ್ಜನ್ಯ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವುದರಿಂದ ರೈತರು ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳಲಿದ್ದಾರೆ. ಈ ಭಾಗದಲ್ಲಿ ಈಗಾಗಲೇ ಹೆಚ್ಚು ಕೈಗಾರಿಕೆಗಳಿವೆ. ಕೃಷಿ ಭೂಮಿಯಲ್ಲಿ ಕೈಗಾರಿಕೆಯನ್ನು ಸ್ಥಾಪಿಸುವುದರಿಂದ ಭೂಮಿಯ ಮೇಲೆ ದೌರ್ಜನ್ಯದಂತಾಗುತ್ತದೆ. ರೈತ ಮಹಿಳೆಯರು ಸಹ ಅಹೋರಾತ್ರಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ರೈತರ ಹೋರಾಟಕ್ಕೆ ಸರ್ಕಾರ ಪ್ರತಿಕ್ರಿಯಿಸಿ ಭೂಸ್ವಾಧೀನದಿಂದ ಹಿಂದೆ ಸರಿಯಬೇಕು ಎಂದು ಭಾರತೀಯ ಕಿಸಾನ್ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ್ಯದ ಅಧ್ಯಕ್ಷ ಹಾಡ್ಯಾ ರಮೇಶ್ ರಾಜು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.