ದೊಡ್ಡಬಳ್ಳಾಪುರ: ತಾಲ್ಲೂಕಿನಲ್ಲಿ ಕೊರೊನಾ ಸೋಂಕಿತರ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿರುವ ಸಂದರ್ಭದಲ್ಲಿಯೇ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್-19 ಪರೀಕ್ಷೆ ಸ್ಥಗಿತಗೊಳಿಸಲಾಗಿದೆ.
ಹೀಗಾಗಿ ಮೂರು ದಿನಗಳಿಂದಲೂ ತಾಲ್ಲೂಕು ಆಡಳಿತದಿಂದ ಬಿಡುಗಡೆಯಾಗುತ್ತಿರುವ ಆರೋಗ್ಯ ಮಾಹಿತಿಯಲ್ಲಿ ಹಳೇಯ ಅಂಕಿ ಅಂಶಗಳಷ್ಟೆ ಬರುತ್ತಿವೆ. ಉಳಿದಂತೆ ಕೋವಿಡ್-19 ಹೊಸ ಪ್ರಕರಣಗಳು ಶೂನ್ಯ ಎಂದಷ್ಟೇ ಇದೆ.
ತಾಲ್ಲೂಕು ಆಡಳಿತದಿಂದ ಶನಿವಾರ ಬಿಡುಗಡೆಯಾಗಿರುವ ಆರೋಗ್ಯ ಮಾಹಿತಿಯಂತೆ ಪ್ರಸ್ತುತ ತಾಲ್ಲೂಕಿನಲ್ಲಿ 2,047 ಮಂದಿಗೆ ಸೋಂಕು ತಗುಲಿದ್ದು, 1,430 ಮಂದಿ ಗುಣಮುಖರಾಗಿದ್ದಾರೆ. 71 ಜನ ಮೃತಪಟ್ಟಿದ್ದಾರೆ. ಶನಿವಾರ ಸಂಗ್ರಹ ಮಾಡಿರುವ 197 ಜನರ ಗಂಟಲ ದ್ರವ ಮಾದರಿ ಬೆಂಗಳೂರಿನ ರಾಜೀವ್ಗಾಂಧಿ ಆಸ್ಪತ್ರೆಯ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.
ಹೆರಿಗೆಗೆ ದಾಖಲು ಮಾಡಿಕೊಳ್ಳಲು ಕೋವಿಡ್ ಪರೀಕ್ಷಾ ವರದಿ ಅಗತ್ಯ ಎನ್ನುತ್ತಾರೆ. ನನ್ನ ಪತ್ನಿಯ ಗಂಟಲು ದ್ರವ ಪರೀಕ್ಷೆಗೆ ನೀಡಿ ನಾಲ್ಕು ದಿನ ಕಳೆದಿದ್ದರೂ ಸಹ ಇನ್ನು ವರದಿ ಬರಬೇಕು ಎನ್ನುತ್ತಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಚಿಕ್ಕಪೇಟೆ ನಿವಾಸಿ ಮಹದೇವ್ ಅವರು ತಮ್ಮ ಅಳಲು ತೋಡಿಕೊಂಡರು. ಸರ್ಕಾರಿ ಆಸ್ಪತ್ರೆಯಲ್ಲಿ ರ್ಯಾಪಿಡ್ ಕಿಟ್ ಸರಬರಾಜು ಇಲ್ಲದೆ ಕೋವಿಡ್ ಪರೀಕ್ಷೆ ಸ್ಥಗಿತಗೊಂಡಿರುವ ಕುರಿತಂತೆ ಮಂಗಳವಾರ ಕ್ಷೇತ್ರದ ಶಾಸಕ ಟಿ.ವೆಂಕಟರಮಣಯ್ಯ ಅವರು ಸಹ ವಿಧಾನ ಸಭಾ ಅಧಿವೇಶನದಲ್ಲೂ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.