ಸೂಲಿಬೆಲೆ: ವಾಲ್ಮಿಕೀ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಿರುದ್ಧ ಬುಧವಾರ ಬೆಳಿಗ್ಗೆ ರಸ್ತೆ ತಡೆ ಮಾಡಿ ಪ್ರತಿಭಟಿಸಿದರು.
ಶೀಘ್ರವಾಗಿ ರಸ್ತೆಯನ್ನು ದುರಸ್ತಿಗೊಳಿಸದಿದ್ದರೆ ರಸ್ತೆ ಬಂದ್ ಮಾಡಿ ಅನಿರ್ದಿಷ್ಟಾವಧಿ ಮುಷ್ಕರ ಹಮ್ಮಿಕೊಳ್ಳಲಾಗುವುದು ಎಂದು ವಕೀಲರಾದ ನರಸಿಂಹಮೂರ್ತಿ ಹೇಳಿದರು.
ಇಲ್ಲಿನ ವಾಲ್ಮಿಕೀ ವೃತ್ತವನ್ನು ಹಾಯ್ದು ಹೋಗುವ ರಾಷ್ಟ್ರೀಯ ಹೆದ್ದಾರಿ (207) ರಲ್ಲಿ, ಗುಂಡಿ ಬಿದ್ದು ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ. ವಾಹನಗಳ ಸಂಚಾರದಿಂದ, ವಿಪರೀತ ದೂಳಿನ ಕಣಗಳು ಏಳುತ್ತಿವೆ. ವಾಲ್ಮಿಕಿ ವೃತ್ತವು ಪ್ರಮುಖ ನಗರಗಳಿಗೆ ಸಂಪರ್ಕ ಕಲ್ಪಿಸುವ ಮತ್ತು ವಾಣಿಜ್ಯ ವ್ಯವಹಾರ ಹಾಗೂ ಬ್ಯಾಂಕ್ಗಳು, ಶಾಲೆಗಳಿಂದ ಕೂಡಿರುವ ಪ್ರಮುಖ ಕೇಂದ್ರಸ್ಥಾನವಾಗಿದ್ದು, ದಿನ ನಿತ್ಯ ಸಂಚರಿಸುವ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪ್ರಯಾಣಿಕರು, ವೃದ್ಧರು ಹಾಗೂ ಸ್ಥಳೀಯ ವ್ಯಾಪರಸ್ಥರು ರಸ್ತೆಯಲ್ಲಿ ಏಳುವ ದೂಳಿನಿಂದ ಉಸಿರಾಟದ ಸಮಸ್ಯೆಗೆ ಒಳಗಾಗುತ್ತಿರುವುದು ಸಾಮಾನ್ಯವಾಗಿದೆ. ಅಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಗ್ರಾ.ಪಂ.ಸದಸ್ಯ ರಾಘವೇಂದ್ರ ಒತ್ತಾಯಿಸಿದರು.
ಪ್ರಜಾವಾಣಿ ಪತ್ರಿಕೆಯಲ್ಲಿ ಅ.16 ರಂದು ‘ರಸ್ತೆಯಲ್ಲಿ ಗುಂಡಿ: ಸವಾರರ ಶಾಪ’ ಎಂಬ ಶಿರ್ಷೀಕಯಲ್ಲಿ ರಸ್ತೆ ಸಮಸ್ಯೆ ಬಗ್ಗೆ ಸುದ್ದಿ ಪ್ರಕಟಿಸಲಾಗಿತ್ತು, ಪ್ರಕಟವಾದ ನಂತರ ರಸ್ತೆ ದುರಸ್ತಿಯನ್ನು ಕೈಗೊಂಡ ಇಲಾಖೆ ಆಲಪ್ಪನಹಳ್ಳಿ ಗ್ರಾಮದಿಂದ ಕಮ್ಮಸಂದ್ರ ಗ್ರಾಮದವರೆಗೆ ಡಾಂಬರು ಹಾಕಿ, ಸೂಲಿಬೆಲೆ ಸಮೀಪ ಕೆಲವು ಗುಂಡಿಗಳನ್ನು ಮುಚ್ಚಿದೆ.
ರಾಷ್ಟ್ರೀಯ ಹೆದ್ದಾರಿ (207) ಸೈಟ್ ಇಂಜಿನಿಯರ್ ನಿಖಿಲ್ ಅವರನ್ನು ಪತ್ರಿಕೆ ಸಂಪರ್ಕಿಸಿದಾಗ, ವೃತ್ತದಲ್ಲಿ ರಸ್ತೆಯ ಎರಡು ಬದಿಯಲ್ಲಿ ನೀರು ಹರಿಯುವ ಕಾಲುವೆ ಇಲ್ಲದಿರುವುದರಿಂದ ರಸ್ತೆಯಲ್ಲಿ ನೀರು ನಿಂತು ಗುಂಡಿಗಳಿಗೆ ಕಾರಣವಾಗಿದೆ. 10 ದಿನದಲ್ಲಿ ಎಲ್ಲ ದುರಸ್ಥಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಲೋಕೆಶ್, ಅರುಣ್, ರಮೇಶ್, ಶಂಕರ್, ಪೈರೋಜ್ ಹಾಗೂ ರೈತ ಮುಖಂಡ ಗಿಡ್ಡಪ್ಪನಹಳ್ಳಿ ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.