ADVERTISEMENT

ಬ್ಯಾಂಕ್ ಖಾತೆ ಗೌಪ್ಯತೆ ಕಾಪಾಡಿಕೊಳ್ಳಿ: ಸೂಲಿಬೆಲೆ ಎಸ್‌ಐ ಸಲಹೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 12:24 IST
Last Updated 8 ಜನವರಿ 2020, 12:24 IST
ಮುತ್ತಕದಹಳ್ಳಿ ಗ್ರಾಮದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸೂಲಿಬೆಲೆ ಠಾಣೆ ಸಬ್ ಇನ್ಸಪೆಕ್ಟರ್ ಮಧುಸೂದನೆ ಅವರಿಗೆ ಸನ್ಮಾನಿಸಲಾಯಿತು
ಮುತ್ತಕದಹಳ್ಳಿ ಗ್ರಾಮದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸೂಲಿಬೆಲೆ ಠಾಣೆ ಸಬ್ ಇನ್ಸಪೆಕ್ಟರ್ ಮಧುಸೂದನೆ ಅವರಿಗೆ ಸನ್ಮಾನಿಸಲಾಯಿತು   

ಸೂಲಿಬೆಲೆ: ಸಾರ್ವಜನಿಕರು ತಮ್ಮ ಬ್ಯಾಂಕಿನ ಖಾತೆಗೆ ಸಂಬಂಧಪಟ್ಟ ಮಾಹಿತಿಗಳನ್ನು ಯಾರ ಜತೆಯೂ ಹಂಚಿಕೊಳ್ಳದೆ ಗೌಪ್ಯತೆಯನ್ನು ಕಾಪಾಡಿಕೊಳ್ಳಬೇಕು, ಯಾವುದೇ ರೀತಿಯ ಮಾಹಿತಿಗಳನ್ನು ಮೊಬೈಲ್ ಅಥವಾ ದೂರವಾಣಿ ಮೂಲಕ ನೀಡಬಾರದು ಎಂದು ಸೂಲಿಬೆಲೆ ಪೊಲೀಸ್ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಮಧುಸೂದನ್ ತಿಳಿಸಿದರು.

ಸೂಲಿಬೆಲೆ ಹೋಬಳಿಯ ಮುತ್ತಕದಹಳ್ಳಿ ಗ್ರಾಮದಲ್ಲಿ ನಡೆದ ಪೊಲೀಸ್ ಗಸ್ತು ಮತ್ತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ನಿರ್ದೇಶನದಂತೆ ಈ ಕಾರ್ಯಕ್ರಮವನ್ನು, ಅಂಗನವಾಡಿ ಕೇಂದ್ರಗಳು ಹಾಗೂ ಶಾಲೆಗಳ ಬಳಿ ನಡೆಸಲಾಗುತ್ತಿದೆ. ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಇಲಾಖೆಯ ವತಿಯಿಂದ ‘ಯುವ’ ಎಂಬ ಪುಸ್ತಕವನ್ನು ವಿತರಿಸಲಾಗುತ್ತಿದೆ ಎಂದರು.

ADVERTISEMENT

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗಾಗಿ ಇಲಾಖೆಯಲ್ಲಿ ಅನೇಕ ಮಾಹಿತಿಗಳಿದ್ದು, ಪೊಲೀಸ್ ಠಾಣೆಗೆ ಭೇಟಿ ಮಾಡಿ ಪಡೆಯಬಹುದು. ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಮತ್ತು ಸಾರ್ವಜನಿಕ ಸಭೆಗಳನ್ನು ಆಯೋಜಿಸುವುದರ ಮೂಲಕ ಸಾಮಾಜಿಕ ಸಾಮರಸ್ಯ ಕಾಪಾಡುವ ಕೆಲಸ ಮಾಡುತ್ತಿದ್ದು ಜನರು ಸಹಕಾರ ನೀಡಬೇಕು ಎಂದರು.

ಕನ್ನಡ ಸಾಹಿತ್ಯ ಪರಿಷತ್ ಕಾರ್ಮಿಕ ಘಟಕ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಂ.ಚೌಡೇಗೌಡ ಮಾತನಾಡಿ, ‘ಪ್ರತಿಯೊಬ್ಬ ನಾಗರಿಕ ನನ್ನ ಊರು, ನನ್ನ ನಾಡು, ನನ್ನ ರಾಷ್ಟ್ರ ಎಂಬ ಅಭಿಮಾನ ಬೆಳಸಿಕೊಳ್ಳಬೇಕು. ರಾಜಕೀಯ ಕೇವಲ ಚುನಾವಣೆಗಳಿಗೆ ಸೀಮಿತವಾಗಬೇಕು. ಗ್ರಾಮದಲ್ಲಿ ಸಹೋದರರಂತೆ ಜೀವಿಸಬೇಕು’ ಎಂದು ಮನವಿ ನೀಡಿದರು.

ಪೊಲೀಸ್ ಇಲಾಖೆ, ಮುತ್ತಕದಹಳ್ಳಿ ಸರ್ಕಾರಿ ಶಾಲೆ ಹಾಗೂ ಹೊಸಕೋಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎನ್.ಮುನಿನಾರಾಯಣಸ್ವಾಮಿ, ಹಾಲು ಡೇರಿ ಕಾರ್ಯದರ್ಶಿ ಮುನಿರಾಜು, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದೇವರಾಜ್, ಉಪಾಧ್ಯಕ್ಷ ಶಂಕರ್, ಮುಖಂಡರಾದ ಬೈರೇಗೌಡ, ಮುನಿದೊಡ್ಡಪ್ಪ, ಮುಖ್ಯ ಶಿಕ್ಷಕ ತುಕರಾಂ, ಸಹ ಶಿಕ್ಷಕಿ ಬಿಂದು, ಅಂಗನವಾಡಿ ಕಾರ್ಯಕರ್ತೆ ಮೀನಾಕ್ಷಿ, ಸೊಣ್ಣಬೈಚನಹಳ್ಳಿ ಶಾಲೆ ಮುಖ್ಯ ಶಿಕ್ಷಕ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.