ವಿಜಯಪುರ: ಸರ್ಕಾರದ ಯೋಜನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕಾದರೆ ಬ್ಯಾಂಕ್ಗಳ ಅಧಿಕಾರಿಗಳ ಸ್ಪಂದನೆಯು ಮುಖ್ಯವಾಗುತ್ತದೆ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿ ಎಚ್. ಲಕ್ಷ್ಮೀ ಹೇಳಿದರು.
ಇಲ್ಲಿನ ಕರ್ಣಾಟಕ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ವಿಜಯ ಬ್ಯಾಂಕ್ಗಳಿಗೆ ಭೇಟಿ ನೀಡಿ ಸಂದರ್ಶನದಲ್ಲಿ ಆಯ್ಕೆಯಾಗಿರುವ ಫಲಾನುಭವಿಗಳ ಪ್ರಗತಿಯ ಬಗ್ಗೆ ಬ್ಯಾಂಕುಗಳಿಂದ ಮಾಹಿತಿ ಪಡೆದುಕೊಂಡು ಅವರು ಮಾತನಾಡಿದರು.
‘ಗ್ರಾಮಾಂತರ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡುವುದರ ಜೊತೆಗೆ ಯುವಜನರು, ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎನ್ನುವುದು ಮುಖ್ಯ ಉದ್ದೇಶ. ಈ ಕಾರಣ ಬ್ಯಾಂಕ್ಗಳ ಮೂಲಕ ಸಾಲ ಸೌಲಭ್ಯಗಳನ್ನು ಕಲ್ಪಿಸಿ ಸಬ್ಸಿಡಿಯನ್ನೂ ನೀಡುತ್ತಿದೆ.ಪದೇ ಪದೇ ನಾವು ಬಂದು ಅಧಿಕಾರಿಗಳ ಜತೆ ಚರ್ಚೆ ಮಾಡಿದರೂ ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರುತ್ತೇವೆ’ ಎಂದರು.
ಇಲಾಖೆಯಿಂದ ಆಯ್ಕೆಯಾಗಿರುವ ಕೆಲ ಫಲಾನುಭವಿಗಳಿಗೆ ಸಾಲ ಮಂಜೂರು ಮಾಡಿಕೊಡದ ಕರ್ಣಾಟಕ ಬ್ಯಾಂಕಿನ ವ್ಯವಸ್ಥಾಪಕರನ್ನು ಮಾರ್ಗದರ್ಶಿ ಬ್ಯಾಂಕಿನ ವ್ಯವಸ್ಥಾಪಕರು ದೂರವಾಣಿಯ ಮೂಲಕ ತರಾಟೆಗೆ ತೆಗೆದುಕೊಂಡರು.ಸರ್ಕಾರ, ನಿರುದ್ಯೋಗಿಗಳಿಗೆ ಸ್ವಯಂ ಉದ್ಯೋಗ ಮಾಡಿಕೊಳ್ಳಲು ಅವಕಾಶ ನೀಡುತ್ತಿದ್ದರೂ ಬ್ಯಾಂಕುಗಳಲ್ಲಿ ವಿನಾಕಾರಣ ವಿಳಂಬ ಮಾಡುವುದರ ಜೊತೆಗೆ ಫಲಾನುಭವಿಗಳನ್ನು ಅಲೆದಾಡಿಸಬೇಡಿ ಎಂದು ಸೂಚಿಸಿದರು.
ಫಲಾನುಭವಿಗಳ ಆಧಾರ್ ಕಾರ್ಡ್, ಪಾನ್ಕಾರ್ಡ್ ತಂದು ಕೊಡಿ, ಸಿಬಿಲ್ ಪರಿಶೀಲನೆ ಮಾಡಬೇಕು. ನಮ್ಮ ಬ್ಯಾಂಕಿನಲ್ಲಿ ಇಂಟರ್ನೆಟ್ ಕೆಲಸ ಮಾಡುತ್ತಿಲ್ಲ. ಹೊರಗೆ ಹೋಗಿ ಪರಿಶೀಲನೆ ಮಾಡಿಕೊಂಡು ಬರಬೇಕು ಎಂದು ಫಲಾನುಭವಿಗಳಿಗೆ ವ್ಯವಸ್ಥಾಪಕ ತಿಳಿಸಿದರು. ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ಕಚೇರಿ ಸಹಾಯಕ ರಾಮಾಂಜಿನಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.