ADVERTISEMENT

ತಿಮ್ಮರಾಯಸ್ವಾಮಿ ರಾಜಮುಡಿ ಉತ್ಸವ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭಾಗಿ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2022, 6:26 IST
Last Updated 14 ಏಪ್ರಿಲ್ 2022, 6:26 IST
ಆನೇಕಲ್‌ನ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ರಾಜಮುಡಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡಿದ್ದರು
ಆನೇಕಲ್‌ನ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ರಾಜಮುಡಿ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಾಲ್ಗೊಂಡಿದ್ದರು   

ಆನೇಕಲ್:ಪಟ್ಟಣದ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ರಾಜಮುಡಿ ಉತ್ಸವ ಶ್ರದ್ಧಾಭಕ್ತಿಯಿಂದ ಬುಧವಾರ ನೆರವೇರಿತು.

ನೂರಾರು ಭಕ್ತರು ವೈಭವ ರಾಜಮುಡಿ ಉತ್ಸವಕ್ಕೆ ಸಾಕ್ಷಿಯಾದರು. ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರು ಉತ್ಸವದಲ್ಲಿ ಭಾಗಿಯಾಗಿದ್ದರು.

ಉತ್ಸವದ ಅಂಗವಾಗಿ ತಿಮ್ಮರಾಯಸ್ವಾಮಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಸ್ವಾಮಿಯ ಉತ್ಸವ ಮೂರ್ತಿಗೆ ರಾಜಮುಡಿಯನ್ನು ತೊಡಿಸಿ ಅರ್ಚಕರು ವಿಶೇಷ ಪೂಜೆ ನೆರವೇರಿಸಿದರು. ನಂತರ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು.

ADVERTISEMENT

ಮೈಸೂರು ಮಹಾರಾಜರನ್ನು ಮಹಿಳೆಯರು ಮಂಗಲ ಕಲಶಗಳ ಮೆರವಣಿಗೆಯೊಂದಿಗೆ ಬರಮಾಡಿಕೊಂಡರು. ಕಾರ್ಯಕ್ರಮದ ಅಂಗವಾಗಿ ಮಂಗಳವಾದ್ಯ, ಪಂಚವಾದ್ಯ, ಭರತನಾಟ್ಯ, ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮೈಸೂರು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಘಟನೆಗಳು ಕಳವಳಕಾರಿಯಾಗಿವೆ. ಧರ್ಮ ಧರ್ಮಗಳ ನಡುವಿನ ಸಂಘರ್ಷ ಸಮಾಜದ ಅಭಿವೃದ್ಧಿ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಎಲ್ಲರೂ ಅಣ್ಣ– ತಮ್ಮಂದಿರಂತೆ ಒಗ್ಗೂಡಿ ಬದುಕಬೇಕು. ಧಾರ್ಮಿಕ ಕಾರ್ಯಗಳು ನಡೆಸುವುದರಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ದೊರೆಯುತ್ತದೆ ಎಂದು ಹೇಳಿದರು.

ಪಂಡರಿ ಮಾಸ್ಟರ್‌ ವೆಂಕಟರಾಜು, ಸೊಸೈಟಿ ಚನ್ನರಾಜು ಮತ್ತು ಭೈರರಾಜು ಕುಟುಂಬದವರು ರಾಜಮುಡಿ ಉತ್ಸವ ಆಯೋಜಿಸಿದ್ದರು. ತಹಶೀಲ್ದಾರ್‌ ಪಿ. ದಿನೇಶ್‌, ಪುರಸಭಾ ಅಧ್ಯಕ್ಷ ಎನ್.ಎಸ್. ಪದ್ಮನಾಭ, ಉಪಾಧ್ಯಕ್ಷೆ ಮಾಲಾ ಭಾರ್ಗವ್‌, ಸದಸ್ಯೆ ಪವಿತ್ರಾ ರಘು, ಆಧ್ಯಾತ್ಮಿಕ ಚಿಂತಕರಾದ ರಾಮಚಂದ್ರ ಭಟ್, ಲಕ್ಷ್ಮಿನಾರಾಯಣಚಾರ್ಯ ಇದ್ದರು. ಆನೇಕಲ್‌ ತಿಮ್ಮರಾಯಸ್ವಾಮಿ ದೇವಾಲಯದಲ್ಲಿ ಇದೇ ಮೊದಲ ಬಾರಿಗೆ ರಾಜಮುಡಿ ಉತ್ಸವ ನಡೆಸಲಾಯಿತು. ನೂರಾರು ಭಕ್ತರು ವೈಭವದ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಯದುವೀರ್‌ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರನ್ನು ದೇವಾಲಯ ಸಮಿತಿಯು ಪ್ರತಿ ವರ್ಷ ರಾಜಮುಡಿ ಉತ್ಸವಕ್ಕೆ ಆಗಮಿಸುವಂತೆ ಆಹ್ವಾನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.