ದೇವನಹಳ್ಳಿ: ಅವೈಜ್ಞಾನಿಕ ಕಬ್ಬಿಣದ ಮುಳ್ಳಿನ ಬೇಲಿಯೇ ಕಡವೆ ಸಾವಿಗೆ ಕಾರಣವಾಗಿದೆ ಎಂದು ರಾಯಸಂದ್ರ ಗ್ರಾಮದ ವೆಂಕಟರಾಜು ಅರೋಪಿಸಿದರು.
ಇಲ್ಲಿನ ರಾಯಸಂದ್ರ ಗ್ರಾಮದ ರಸ್ತೆ ಪಕ್ಕದಲ್ಲಿರುವ ಸಾಮಾಜಿಕ ಆರಣ್ಯ ಪ್ರದೇಶದಲ್ಲಿ ಮುಳ್ಳಿನ ಬೇಲಿಗೆ ಸಿಲುಕಿ ಮೃತಪಟ್ಟ ಕಡವೆಯನ್ನು ಹೊರತೆಗೆದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ಉದ್ದೇಶಕ್ಕೆ ಅರಣ್ಯ ಇಲಾಖೆ ಈ ಕಬ್ಬಿಣದ ಮುಳ್ಳಿನ ತಂತಿ ಬೇಲಿಯನ್ನು ಅಳವಡಿಸಿದೆ ಎಂಬುದೇ ಅರ್ಥವಾಗುತ್ತಿಲ್ಲ. ಕಳೆದ ಎರಡು ವರ್ಷದಲ್ಲಿ ಕಡವೆ ಮೃತಪಟ್ಟಿರುವ ಮೂರನೇ ಪ್ರಕರಣ ಇದಾಗಿದೆ. ಕಾಡುಗಳಲ್ಲಿ ಮೇವಿಲ್ಲ. ಪ್ರಾಣಿಗಳಿಗೆ ಕುಡಿಯುವ ನೀರಿಲ್ಲ. ಆರಣ್ಯ ಇಲಾಖೆ, ಕಾಡುಗಳಲ್ಲಿ ಸಿಮೆಂಟ್ ತೊಟ್ಟಿ ನಿರ್ಮಾಣ ಮಾಡಿ ನೀರು ತುಂಬಿಸುವ ಕೆಲಸ ಯಾಕೆ ಮಾಡಬಾರದು ಎಂದರು.
ಕೋಟ್ಯಂತರ ರೂಪಾಯಿ ವರಮಾನ ಬರುವ ಅರಣ್ಯ ಇಲಾಖೆಗೆ ಅರಣ್ಯೀಕರಣಕ್ಕೆ ಅದೇ ರೀತಿ ಅನುದಾನ ಬಿಡುಗಡೆಯಾಗುತ್ತದೆ. ಅದೇ ಅನುದಾನದಲ್ಲಿ ಕಾಡಿನ ಆಯಾ ಪ್ರಮುಖ ಸ್ಥಳದಲ್ಲಿ ಗುಂಡಿ ಹೊಂಡ ನಿರ್ಮಾಣ ಮಾಡಿ ವಾರಕ್ಕೆ ಎರಡು ಬಾರಿ ನೀರು ತುಂಬಿಸಿದರೆ ಅಪಾರ ಪ್ರಮಾಣದ ನವಿಲು, ಮೊಲ, ಕಡವೆ, ಕಾಡು ಹಂದಿ ಇತರೆ ಪ್ರಾಣಿಗಳಿಗೆ ಹೆಚ್ಚು ಅನುಕೂಲವಾಗುತ್ತದೆ. ಮುಳ್ಳಿನ ತಂತಿ ತೆಗೆದು ನಯವಾದ ತಂತಿ ಬೇಲಿ ಅಳವಡಿಸಲು ಇಲಾಖೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಮೂರ್ತಿ, ಮುಖಂಡ ನರಸಿಂಹ ಮೂರ್ತಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.