ADVERTISEMENT

ದೇವನಹಳ್ಳಿ : ಕೆರೆಯಲ್ಲಿ ಮುಳುಗಿ ಇಬ್ಬರು ಯುವಕರು ಸಾವು

​ಪ್ರಜಾವಾಣಿ ವಾರ್ತೆ
Published 29 ಮೇ 2023, 13:56 IST
Last Updated 29 ಮೇ 2023, 13:56 IST
ರಾಮನಾಥಪುರ ಕೆರೆಯಲ್ಲಿ ಭಾನುವಾರ ಈಜಲು ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು
ರಾಮನಾಥಪುರ ಕೆರೆಯಲ್ಲಿ ಭಾನುವಾರ ಈಜಲು ಬಂದಿದ್ದ ಬೆಂಗಳೂರಿನ ನಾಲ್ವರು ಯುವಕರು   

ದೇವನಹಳ್ಳಿ: ಕುಂದಾಣ ಹೋಬಳಿಯ ರಾಮನಾಥಪುರ ಸಮೀಪದ ಕೆರೆಯಲ್ಲಿ ಭಾನುವಾರ ಮಧ್ಯಾಹ್ನ ಈಜಲು ತೆರಳಿದ್ದ ಬೆಂಗಳೂರಿನ ನಾಲ್ವರು ಯುವಕರ ಪೈಕಿ ಇಬ್ಬರು ಕರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಮತ್ತಿಬ್ಬರು ನಾಪತ್ತೆಯಾಗಿದ್ದಾರೆ.

ಬೆಂಗಳೂರಿನ ಆರ್‌.ಟಿ.ನಗರ ಹಾಗೂ ಚಾಮುಂಡಿ ನಗರದ ನಿವಾಸಿಗಳಾದ ಶೇಖ್‌ ತಾಹೀರ್‌, ತೌಹೀದ್‌, ಶಾಹೀದ್‌, ಫೈಜಲ್‌ ಖಾನ್‌ ಎಂಬ ಯುವಕರು ವಾರಾಂತ್ಯದ ಮೋಜಿಗೆ ದೇವನಹಳ್ಳಿ ಸಮೀಪದ ನಂದಿ ಬೆಟ್ಟಕ್ಕೆ ಬಂದಿದ್ದರು. ಅಲ್ಲಿಂದ ರಾಮನಾಥಪುರದ ಕೆರೆಗೆ ಈಜಲು ಬಂದಿದ್ದರು ಎಂದು ಹೇಳಲಾಗಿದೆ. ಈ ನಾಲ್ವರೂ 18–20 ವರ್ಷ ಆಸುಪಾಸಿನವರು. 

ಭಾನುವಾರ ತಡರಾತ್ರಿವರೆಗೂ ನಡೆಯುತ್ತಿದ್ದ ಕಾರ್ಯಾಚರಣೆಯಲ್ಲಿ ಇಬ್ಬರು ಯುವಕರ ಶವಗಳು ಪತ್ತೆಯಾಗಿವೆ. ವಿಶ್ವನಾಥಪುರ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಇನ್ನಿಬ್ಬರಿಗಾಗಿ ಶೋಧ ಕಾರ್ಯಾಚರಣೆ ಮುಂದುವರಿಸಿದ್ದಾರೆ.

ADVERTISEMENT

ಕೆರೆಯ ದಡದಲ್ಲಿ ಸಂಜೆ ದ್ವಿಚಕ್ರ ವಾಹನ ಹಾಗೂ ಚಪ್ಪಲಿ ಇರುವುದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಯನ್ನು ಕರೆಸಿ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ.

‘ಮೊದಲಿಗೆ ಇಬ್ಬರು ಯುವಕರು ಈಜಲು ತೆರಳಿರುವ ಸಾಧ್ಯತೆ ಇದೆ. ಅವರು ಮುಳುಗುತ್ತಿರುವುದನ್ನು ಗಮನಿಸಿ ಮತ್ತಿಬ್ಬರು ಸ್ನೇಹಿತರು ಅವರ ನೆರವಿಗೆ ಧಾವಿಸಿರಬಹುದು’ ಎಂದು ಗ್ರಾಮಸ್ಥರು ಶಂಕಿಸಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.