ದೊಡ್ಡಬಳ್ಳಾಪುರ: ಮುಂಗಾರು ಪ್ರಾರಂಭಕ್ಕೂ ಮುನ್ನವೇ ತಾಲ್ಲೂಕಿನಲ್ಲಿ ಜನವರಿ ತಿಂಗಳಿನಿಂದ ಇಲ್ಲಿವರೆಗೆ ವಾಡಿಕೆ ಮಳೆ 134 ಮಿ.ಮೀ. ಆದರೆ, ಮೇ 23ಕ್ಕೆ 223.78 ಮಿಮೀ ಮಳೆಯಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿರುವ ಹಿನ್ನೆಲೆಯಲ್ಲಿ ರೈತರು ಉಳುಮೆಯಲ್ಲಿ ತೊಡಗಿದ್ದು, ಬಿತ್ತನೆಗೆ ಸಿದ್ಧತೆ ಪ್ರಾರಂಭಿಸಿದ್ದಾರೆ. ಕೃಷಿ ಇಲಾಖೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರಗಳಲ್ಲಿ ಈಗಾಗಲೇ ರಾಗಿ, ಮುಸುಕಿನ ಜೋಳ, ಅಲಸಂದೆ, ತೊಗರಿ ಹಾಗೂ ಶೇಂಗಾ ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ.
ರೈತರು ಮೇ ತಿಂಗಳ ಕೊನೆ ವಾರದಲ್ಲಿ ತೊಗರಿ ಮತ್ತು ನೆಲಗಡಲೆ ಬಿತ್ತನೆ ಮಾಡಲು ಸೂಕ್ತ ಸಮಯವಾಗಿರುವುದರಿಂದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ಆಧಾರ್ ಸಂಖ್ಯೆ, ಪ್ರೂಟ್ ಸಂಖ್ಯೆ ನೀಡಿ ಸರ್ಕಾರದ ಸಹಾಯಧನದಡಿ ಬಿತ್ತನೆ ಬೀಜನ ರಿಯಾಯಿತಿ ದರದಲ್ಲಿ ಪಡೆಯಬಹುದಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಪಿ.ರಾಘವೇಂದ್ರ ತಿಳಿಸಿದ್ದಾರೆ.
ಈ ವರ್ಷ ಮುಂಗಾರು ಮಳೆ ನಿಗದಿತ ಸಮಯಕ್ಕಿಂತ ಮುಂಚೆಯೇ ಮೇ 28ಕ್ಕೆ ಕೇರಳದ ಕರಾವಳಿ ಪ್ರವೇಶ ಮಾಡಲಿದೆ ಎನ್ನುವ ಹವಾಮಾನ ಇಲಾಖೆ ವರದಿ ಬೆನ್ನಲ್ಲೇ ಶನಿವಾರ ಬೆಳಗ್ಗೆಯಿಂದಲೇ ತಾಲ್ಲೂಕಿನಲ್ಲಿ ಪಶ್ಚಿಮ ದಿಕ್ಕಿನಿಂದ ಗಾಳಿ ಬೀಸಲು ಪ್ರಾರಂಭವಾಗಿದ್ದು, ಕಪ್ಪನೆ ಮುಂಗಾರು ಮಾರುತಗಳು ಹಾದು ಹೋದವು. ಸಂಜೆ ವೇಳೆಗೆ ಮಳೆ ಕೂಡ ಸುರಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.