ADVERTISEMENT

ಕಾಲುಬಾಯಿ ಜ್ವರ ತಡೆಗೆ ಲಸಿಕೆ ಹಾಕಿಸಿ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2019, 18:45 IST
Last Updated 16 ಅಕ್ಟೋಬರ್ 2019, 18:45 IST
ಕಾರ್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು
ಕಾರ್ಯಕ್ರಮದಲ್ಲಿ ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು   

ದೊಡ್ಡಬಳ್ಳಾಪುರ: ‘ಆರು ತಿಂಗಳಿಗೊಮ್ಮೆ ಕಾಲುಬಾಯಿ ಜ್ವರದ ಲಸಿಕೆಯನ್ನು ರಾಸುಗಳಿಗೆ ಕಡ್ಡಾಯವಾಗಿ ಹಾಕಿಸಬೇಕು. ಇಲ್ಲವಾದರೆ ರೈತರ ಬದುಕಿಗೆ ಆಧಾರವಾಗಿರುವ ರಾಸುಗಳನ್ನು ಕಳೆದುಕೊಳ್ಳಬೇಕಾಗುತ್ತದೆ’ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಕಾಲುಬಾರಿ ರೋಗ ತಡೆಗಟ್ಟಲು ಉಚಿತವಾಗಿ ನೀಡಲಾಗುವ16ನೇ ಸುತ್ತಿನ ಲಸಿಕಾ ಕಾರ್ಯಕ್ರಮಕ್ಕೆಇಲ್ಲಿನ ನಾಗದೇನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ನಾಲ್ಕು ವರ್ಷಗಳ ಹಿಂದೆ ಕಾಲುಬಾಯಿ ಜ್ವರ ಕಾಣಿಸಿಕೊಂಡು ನೂರಾರು ರಾಸುಗಳು ಮರಣ ಹೊಂದಿದ್ದವು. ಕಾಲುಬಾಯಿ ಜ್ವರ ವೈರಸ್‌ನಿಂದ ಬರುವುದರಿಂದ ಇದನ್ನು ತಡೆಯಲು ಮುಂಜಾಗ್ರತೆಯಾಗಿ ಲಸಿಕೆ ಹಾಕಿಸಬೇಕು. ಗ್ರಾಮದಲ್ಲಿ ಒಂದೆರಡು ರಾಸುಗಳಿಗೆ ಲಸಿಕೆ ಹಾಕಿಸದಿದ್ದರೂ ರೋಗ ಹರಡುವ ಅಪಾಯ ಇರುತ್ತದೆ. ವೈದ್ಯರು ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಗ್ರಾಮದ ಎಲ್ಲ ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕಿಸಬೇಕು’ ಎಂದರು.

ADVERTISEMENT

‘ಸರ್ಕಾರದ ವತಿಯಿಂದ ಉಚಿತವಾಗಿ ರಾಸುಗಳಿಗೆ ಹಾಕಲಾಗುತ್ತಿರುವ ಲಸಿಕಾ ಆಂದೋಲನ ನ. 4ರವೆರೆಗೆ ನಡೆಯಲಿದೆ. ತಾಲ್ಲೂಕಿನ ಪ್ರತಿ ಗ್ರಾಮಗಳಿಗೂ ಪಶು ವೈದ್ಯರು ಭೇಟಿ ನೀಡಿ ಚುಚ್ಚು ಮದ್ದು ನೀಡಲಿದ್ದಾರೆ. ರೈತರು ಹಾಗೂ ಹಾಲು ಉತ್ಪಾದಕರ ಸಹಕಾರ ಸಂಘಗಳ ನಿರ್ದೇಶಕರು ಪಶು ವೈದ್ಯರಿಗೆ ಸಹಕಾರ ನೀಡುವ ಮೂಲಕ ಕಾಲುಬಾಯಿ ಜ್ವರದ ವೈರಸ್‌ ನಿರ್ಮೂಲನೆಗೆ ಶ್ರಮಿಸಬೇಕು’ ಎಂದರು.

ಕೆಎಂಎಫ್‌ ನಿರ್ದೇಶಕ ಬಿ.ಸಿ.ಆನಂದ ಕುಮಾರ್, ತಾಲ್ಲೂಕು ಪಂಚಾಯಿತಿ ಸದಸ್ಯ ಚಿಕ್ಕ ಆಂಜಿನಪ್ಪ, ಜಿಲ್ಲಾ ಪಶುಪಾಲನಾ ಇಲಾಖೆ ಉಪ ನಿರ್ದೇಶಕ ಡಾ.ಬಾಲಚಂದ್ರ, ಸಹಾಯಕ ನಿರ್ದೇಶಕ ಡಾ.ರಾಜೇಂದ್ರ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್‌, ನಾಗದೇನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ರಾಜಶೇಖರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.