ADVERTISEMENT

ವಿಜಯಪುರ: ಪುರಸಭೆ ಆಸ್ತಿ ಗುರುತಿಸಲು ಭದ್ರಪಡಿಸಲು ಆಗ್ರಹ

ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಗ್ರಾನೈಟ್‌ ವ್ಯಾಪಾರ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 2:48 IST
Last Updated 11 ಅಕ್ಟೋಬರ್ 2025, 2:48 IST
ವಿಜಯಪುರ ಪಟ್ಟಣದಲ್ಲಿ ಅತಿಕ್ರಮಣವಾಗಿರುವ ಪುರಸಭೆ ಆಸ್ತಿಯಲ್ಲಿ ವ್ಯಕ್ತಿಯೊಬ್ಬರು ಗ್ರಾನೈಟ್ ಕಲ್ಲು ಮಾರಾಟಕ್ಕಿಟ್ಟಿರುವುದು
ವಿಜಯಪುರ ಪಟ್ಟಣದಲ್ಲಿ ಅತಿಕ್ರಮಣವಾಗಿರುವ ಪುರಸಭೆ ಆಸ್ತಿಯಲ್ಲಿ ವ್ಯಕ್ತಿಯೊಬ್ಬರು ಗ್ರಾನೈಟ್ ಕಲ್ಲು ಮಾರಾಟಕ್ಕಿಟ್ಟಿರುವುದು   

ವಿಜಯಪುರ (ದೇವನಹಳ್ಳಿ):  ಪಟ್ಟಣದ ಪುರಸಭೆ ಆಸ್ತಿಗಳನ್ನು ಗುರುತಿಸಿ ತಂತಿ ಬೇಲಿ ಹಾಕಿ ನಾಮಫಲಕ ಅಳವಡಿಸುವ ಮೂಲಕ ಪುರಸಭೆಯ ಅಧಿಕಾರಿಗಳು ಅತಿಕ್ರಮಣಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಡಾ.ಬಿ.ಆರ್.ಅಂಬೇಡ್ಕರ್ ರಕ್ಷಣಾ ಸಮಿತಿಯ ಪದಾಧಿಕಾರಿಗಳು ಆಗ್ರಹಿಸಿದ್ದಾರೆ.

ಪಟ್ಟಣದಲ್ಲಿ ಕೋಟ್ಯಂತರ ಬೆಲೆ ಬಾಳುವ ಪುರಸಭೆಯ ಆಸ್ತಿಗಳಿಗೆ ಕೆಲವು ಸದಸ್ಯರು ನಕಲಿ ದಾಖಲೆ ಸೃಷ್ಟಿಸಿ ಅತಿಕ್ರಮ ಪ್ರವೇಶ ಮಾಡುತ್ತಿದ್ದಾರೆ. ಈ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಪುರಸಭೆ ಆಸ್ತಿ ರಕ್ಷಿಸಿ, ನಾಮಫಲಕ ಅಳವಡಿಸಬೇಕೆಂದು ಒತ್ತಾಯಿಸಿದರು. 

ಪಟ್ಟಣದ ಚಿಕ್ಕಬಳ್ಳಾಪುರ ರಸ್ತೆಯ ಓವರ್ ಟ್ಯಾಂಕ್ ಬಳಿ ಖಾತೆ ನಂ 511/205/209 ಪುರಸಭೆ ಆಸ್ತಿ ಸುಮಾರು ಮೂರು ಸಾವಿರಕ್ಕೂ ಅಧಿಕ ಚದರ ಅಡಿವುಳ್ಳ ಖಾಲಿ ನಿವೇಶನದಲ್ಲಿ ಕೆಲ ಸದಸ್ಯರ ಕುಮ್ಮಕ್ಕಿನಿಂದ ಅತಿಕ್ರಮಣವಾಗಿ ವ್ಯಕ್ತಿಯೊಬ್ಬರು ಗ್ರಾನೈಟ್ ಕಲ್ಲು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದು, ಇದನ್ನು ಕೂಡಲೇ ಪುರಸಭೆ ಅಧಿಕಾರಿಗಳು ತೆರವುಗೊಳಿಸಬೇಕು ಎಂದು ಸಮಿತಿಯ ರಾಜ್ಯಾಧ್ಯಕ್ಷ ಸಿ.ಶ್ರೀನಿವಾಸ್ ಆಗ್ರಹಿಸಿದರು.

ADVERTISEMENT

ಪಟ್ಟಣದಲ್ಲಿ ಪುರಸಭೆಗೆ ಸೇರಿದ ಕೋಟ್ಯಂತರ ಆಸ್ತಿಗಳಿದ್ದು, ಈ ಆಸ್ತಿಗಳನ್ನು ಉಳಿಸಿ ಪುರಸಭೆಗೆ ಆದಾಯ ತರುವ ನಿಟ್ಟಿನಲ್ಲಿ ಪುರಸಭೆಯ ಅಧಿಕಾರಿಗಳು ಮತ್ತು ಅಧ್ಯಕ್ಷರು, ಸದಸ್ಯರು ಕಾರ್ಯನಿರ್ವಹಿಸಬೇಕು. ಇಲ್ಲವಾದರೆ ಸಂಘಟನೆಯಿಂದ ಪುರಸಭೆ ಎದುರು ಅಹೋರಾತ್ರಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.

‘ಅತಿಕ್ರಮಣವಾಗಿರುವ ಪುರಸಭೆಗೆ ಸೇರಿರುವ ಹಲವು ಆಸ್ತಿಗಳನ್ನು ಉಳಿಸುವ ನಿಟ್ಟಿನಲ್ಲಿ ಅನೇಕ ಬಾರಿ ಸಭೆಗಳಲ್ಲಿ ಧ್ವನಿ ಎತ್ತಿ ಮಾತನಾಡಿದ್ದೇನೆ. ಯಾರೇ ಆಗಿರಲಿ ಪುರಸಭೆಯ ಸ್ವತ್ತನ್ನು ಅಕ್ರಮಿಸಿಕೊಂಡಿದ್ದರೆ ಅದನ್ನು ಪುರಸಭೆ ಅಧಿಕಾರಿಗಳು ತೆರವುಗೊಳಿಸಬೇಕು’ ಎಂದು ಪುರಸಭೆ ಸದಸ್ಯ ಹನೀಫುಲ್ಲಾ ಒತ್ತಾಯಿಸಿದರು.

ಅಶ್ವತ್ಥ ಕಟ್ಟೆ ಸ್ಥಳವು ಅತಿಕ್ರಮಣ

ಇದೇ ಪುರಸಭೆ ಸ್ವತ್ತಿನಲ್ಲಿರುವ ಅಶ್ವತ್ಥ ಕಟ್ಟೆಯಲ್ಲಿ ಪೂರ್ವಿಕರ ಕಾಲದಿಂದ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುತ್ತಿದ್ದು ಅತಿಕ್ರಮಣದ ನಂತರ ಅಶ್ವತ್ಥ ಕಟ್ಟೆಯ ದೇವಾಲಯಗಳಿಗೆ ಪೂಜೆ ಸಲ್ಲಿಸಲು ದಾರಿ ಇಲ್ಲವಾಗಿದೆ. ಅಶ್ವತ್ಥ ಕಟ್ಟೆಯ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಲು ನಾಗರಿಕರಿಗೆ ಅವಕಾಶ ಮಾಡಿಕೊಡಬೇಕು. ಇಲ್ಲಿಯೇ ಪುರಸಭೆಯ ಸ್ವತ್ತಿನಲ್ಲಿ ಅತಿಕ್ರಮಣವಾಗಿಟ್ಟಿಕೊಂಡಿರುವ ಮಳಿಗೆಗಳನ್ನು ತೆರವುಗೊಳಿಸಬೇಕೆಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ.

ಪಟ್ಟಣದಲ್ಲಿನ ಪುರಸಭೆ ಆಸ್ತಿಯನ್ನು ಉಳಿಸುವ ಕೆಲಸ ಮಾಡಲಾಗುತ್ತಿದೆ. ಅತಿಕ್ರಮಣವಾಗಿರುವ ಗ್ರಾನೈಟ್ ಕಲ್ಲು ಇಟ್ಟುಕೊಂಡಿರುವ ಪುರಸಭೆ ಸ್ವತ್ತಿಗೆ ಬೀಗ ಹಾಕಲಾಗಿದೆ.
–ಸತ್ಯನಾರಾಯಣ, ಪುರಸಭೆ ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.