ADVERTISEMENT

ದೊಡ್ಡಬಳ್ಳಾಪುರ: ವಿಷ್ಣುವರ್ಧನ್‌ ಅಭಿಮಾನಿ ಬಳಗದಿಂದ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 11:57 IST
Last Updated 16 ಫೆಬ್ರುವರಿ 2020, 11:57 IST
ಘಾಟಿ ಕ್ಷೇತ್ರದಲ್ಲಿ ನಟ ವಿಷ್ಣುವರ್ಧನ್ ಪುತ್ಥಳಿಯನ್ನು ಸಮಾಜಸೇವಕ ಟಿ.ರಾಮಣ್ಣ ಅನಾವರಣಗೊಳಿಸಿದರು
ಘಾಟಿ ಕ್ಷೇತ್ರದಲ್ಲಿ ನಟ ವಿಷ್ಣುವರ್ಧನ್ ಪುತ್ಥಳಿಯನ್ನು ಸಮಾಜಸೇವಕ ಟಿ.ರಾಮಣ್ಣ ಅನಾವರಣಗೊಳಿಸಿದರು   

ದೊಡ್ಡಬಳ್ಳಾಪುರ: ಚಲನಚಿತ್ರ ರಂಗದಲ್ಲಿ ತಮ್ಮ ನಟನೆ ಹಾಗೂ ಬದುಕಿನಲ್ಲಿನ ಆದರ್ಶಗಳ ಮೂಲಕ ಅಭಿಮಾನಿ ಬಳಗವನ್ನು ಹೊಂದಿದ್ದ ವಿಷ್ಣುವರ್ಧನ್ ಅವರು ಜನಪ್ರೀತಿ ಪಡೆದ ನಟರಾಗಿದ್ದರು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಕಣಿವೇಪುರ ಸುನೀಲ್ ಕುಮಾರ್ ಹೇಳಿದರು.

ತಾಲ್ಲೂಕಿನ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಡಾ.ವಿಷ್ಣುವರ್ಧನ್ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ನಟ ವಿಷ್ಣುವರ್ಧನ್ ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ವಿಷ್ಣುವರ್ಧನ್ ಅವರು ಅಭಿನಯಿಸಿರುವ ಚಲನ ಚಿತ್ರಗಳು ಮಾದರಿಯಾಗಿದ್ದವು. ಅವರ ಸ್ಮರಣೆಗಾಗಿ ಘಾಠಿ ಕ್ಷೇತ್ರದಲ್ಲಿ ಪುತ್ಥಳಿ ಅನಾವರಣ ಮಾಡಿರುವುದು ಅವರ ನೆನಪು ಮತ್ತಷ್ಟು ಚಿರಸ್ಥಾಯಿಯಾಗುವಂತೆ ಮಾಡಿದೆ ಎಂದರು.

ADVERTISEMENT

ಸಮಾಜಸೇವಕ ರಾಮಣ್ಣ ಮಾತನಾಡಿ, ದೊಡ್ಡಬಳ್ಳಾಪುರ ನಗರದಲ್ಲಿ ಪುತ್ಥಳಿ ಸ್ಥಾಪನೆ ಮೂಲಕ ತಾಲ್ಲೂಕಿನಾದ್ಯಂತ ಇರುವ ನಟ ವಿಷ್ಣುವರ್ಧನ್ ಅವರ ಅಭಿಮಾನಿಗಳ ಒಕ್ಕೊರಲ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತೆ ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು ಮಾತನಾಡಿ, ಕನ್ನಡ ಚಿತ್ರರಂಗದ ಮೇರು ನಟ ವಿಷ್ಣುವರ್ಧನ್ ಅವರ ಸೇವೆಗೆ ಸರ್ಕಾರಗಳು ಸೂಕ್ತ ಮನ್ನಣೆ ನೀಡದಿರುವುದು ವಿಷಾದನೀಯ. ಸ್ಮಾರಕ ವಿಚಾರದಲ್ಲಿ ವಿಷ್ಣುವರ್ಧನ್ ಅವರಿಗೆ ಮಾಡುತ್ತಿರುವ ಅವಮಾನ ಅಭಿಮಾನಿಗಳ ತಾಳ್ಮೆಯ ಕಟ್ಟೆಯನ್ನು ಒಡೆಯುವಂತೆ ಮಾಡಿದೆ. ಕೂಡಲೇ ಪಕ್ಷಾತೀತವಾಗಿ ಸ್ಮಾರಕ ನಿರ್ಮಾಣಕ್ಕೆ ಮುಂದಾಗಬೇಕು; ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.

ಪುತ್ಥಳಿ ಕೊಡುಗೆ ನೀಡಿದ ವಕೀಲ ರಮೇಶ್.ಆರ್.ಎ ಗೌಡ ಅವರನ್ನು ಸನ್ಮಾನಿಸಲಾಯಿತು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ಸಿ.ಶ್ರೀನಿವಾಸ್, ತೂಬಗೆರೆ ಹೋಬಳಿ ಹೋರಾಟ ಸಮಿತಿ ಅಧ್ಯಕ್ಷ ರವಿಸಿದ್ದಪ್ಪ, ಕಲಾವಿದ ಆಂಜಿನಪ್ಪ, ತೂಬಗೆರೆ ಹೋಬಳಿ ಯುವ ಕಾಂಗ್ರೆಸ್‌ ಅಧ್ಯಕ್ಷ ಮಂಜುನಾಥ್, ಮೇಲಿನಜೋಗಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಪುರುಷೋತ್ತಮ್, ಯುವ ಸೇನಾ ಡಾ.ವಿಷ್ಣುವರ್ದನ್ ಅಭಿಮಾನಿ ಬಳಗದ ಅಧ್ಯಕ್ಷ ಮಧು, ಘಾಟಿ ಆಟೋ ಚಾಲಕರ ಸಂಘದ ಗೌರವ ಅಧ್ಯಕ್ಷ ಯಲಪ್ಪ, ಮುಖಂಡರಾದ ಜಗನಾಥಚಾರ್, ರಾಜಾನುಕುಂಟೆ ಶಿವಶಂಕರ್, ವಿಜಯ್ ಕುಮಾರ್, ಘಾಟಿ ಚಿನ್ನಿ, ಡಿ.ಎಸ್.ರಾಘವೇಂದ್ರ, ಉಮೇಶ್, ಅಭಿಗೌಡ, ಶುಭಾಕರ್, ಗಣೇಶ್ ನಾಯಕ್, ಟಿ.ಮಧು, ಕಿರಣ್ ನಾಯ್ಕ್, ನಟರಾಜ್‌ ನಾಯಕ್, ಸುಬ್ರಹ್ಮಣ್ಯ ನಾಯಕ್, ಚಂದ್ರು ನಾಯ್ಕ್, ಆಕಾಶ್‌ ಭಟ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.