ವಿಜಯಪುರ: ಯುವಜನರಿಗೆ ಉದ್ಯೋಗ ಅವಕಾಶ, ದುಡಿಯುವವರಿಗೆ ಭೂಮಿ, ರೈತರಿಗೆ ನೀರು, ವಿದ್ಯುತ್, ಕಲ್ಪಿಸಬೇಕಾಗಿರುವ ಸರ್ಕಾರಗಳು ಇದುವರೆಗೂ ಜನರಿಗೆ ಮಾಡಿರುವ ಮೋಸ ಅರ್ಥವಾಗಿದೆ. ಈ ಬಾರಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಬಿಎಸ್ಪಿ ಅಭ್ಯರ್ಥಿ ಸಿ.ಎಸ್.ದ್ವಾರಕಾನಾಥ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲಿದ್ದಾರೆ ಎಂದು ಮುಖಂಡ ದಿನೇಶ್ ವಿಶ್ವಾಸ ವ್ಯಕ್ತಪಡಿಸಿದರು.
ಚನ್ನರಾಯಪಟ್ಟಣ ಹೋಬಳಿ ನಾಗನಾಯಕನಹಳ್ಳಿ ಗ್ರಾಮದಲ್ಲಿ ಸಿ.ಎಸ್.ದ್ವಾರಕಾನಾಥ್ ಪರವಾಗಿ ಮತಯಾಚಿಸಿ ಅವರು ಮಾತನಾಡಿದರು.
ಕೇವಲ ರಸ್ತೆ, ಚರಂಡಿಗಳ ನಿರ್ಮಾಣದಿಂದ ದೇಶ ಉದ್ಧಾರವಾಗಲು ಸಾಧ್ಯವಿಲ್ಲ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ನೀಡಬೇಕು. ಕೈಗಾರಿಕೆಗಳ ಸ್ಥಾಪನೆಯಾಗಬೇಕು. ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗಬೇಕು. ಜಾತಿಯ ಆಧಾರದಲ್ಲಿ ಅಭಿವೃದ್ಧಿ ನಿಲ್ಲಿಸಿ ಮಾನವ ಸಂಪನ್ಮೂಲ ಅಭಿವೃದ್ಧಿಯಾಗಬೇಕಾಗಿದೆ ಎಂದರು.
ಮುಖಂಡ ರಾಮಾಂಜಿ ಮಾತನಾಡಿ, ಸ್ವಾತಂತ್ರ್ಯ ಬಂದು 73 ವರ್ಷ ಕಳೆದರೂ ಗ್ರಾಮೀಣ ಪ್ರದೇಶದ ಅದೆಷ್ಟೋ ಹಳ್ಳಿಗಳಿಗೆ ಇಂದಿಗೂ ರಸ್ತೆ ಸಂಪರ್ಕಗಳಿಲ್ಲ. ಚುನಾವಣೆ ಸಮಯದಲ್ಲಿ ರೋಡ್ ಶೋ ಮಾಡಿದರೆ ಹಳ್ಳಿಗಳ ಸಮಸ್ಯೆಗಳ ಹೇಗೆ ಅರ್ಥವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ರೈತರ ಆತ್ಮಹತ್ಯೆ ತಡೆಯುವಂತಹ ನಾಯಕರು ಬೇಕಾಗಿದ್ದಾರೆ. ಒಂದು ಬಾರಿ ಹಣ ತೆಗೆದುಕೊಂಡು ಓಟ್ ಹಾಕಿದರೆ ಇದರ ಕಹಿಯನ್ನು 5ವರ್ಷ ಅನುಭವಿಸಬೇಕಾಗುತ್ತದೆ. ಆದ್ದರಿಂದ ಪ್ರಾಮಾಣಿಕವಾಗಿ ಕೆಲಸ ಮಾಡುವಂತಹ ವ್ಯಕ್ತಿಗೆ ಮತ ನೀಡಿ ಎಂದರು.
ಯುವ ಮುಖಂಡರಾದ ನಾಗೇಂದ್ರ, ಅನಿಲ್, ರಂಜಿತ್, ದರ್ಶನ್, ಶ್ರೀಕಾಂತ್, ಬಸವರಾಜ್, ಶ್ರೀನಿವಾಸ್, ಮುನಿಯಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.