ವಿಜಯಪುರ: ಸಹಕಾರಿ ಕ್ಷೇತ್ರದಲ್ಲಿ ಮಹಿಳೆಯರು ತೊಡಗಿಸಿಕೊಂಡಾಗ ಆರ್ಥಿಕ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ಬಮೂಲ್ ಉಪಾಧ್ಯಕ್ಷ ಇರಿಗೇನಹಳ್ಳಿ ಶ್ರೀನಿವಾಸ್ ಹೇಳಿದರು.
ಚನ್ನರಾಯಪಟ್ಟಣ ಹೋಬಳಿ ವರದೇನಹಳ್ಳಿ ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಕಟ್ಟಡವನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು.
ರಾಮನಗರದಲ್ಲಿ ಹಾಲಿನ ಪುಡಿ ತಯಾರಿಕಾ ಕೇಂದ್ರ ನಿರ್ಮಾಣವಾಗಿರುವುದರಿಂದ ಹಾಲಿಗೆ ಹೆಚ್ಚಿನ ಬೇಡಿಕೆ ಬರುವ ಸಾಧ್ಯತೆಗಳು ಇವೆ. ಪುರುಷರಷ್ಟೆ ಹೊಣೆಗಾರಿಕೆಯನ್ನು ಮಹಿಳೆಯರು ಸಮರ್ಥವಾಗಿ ನಿಭಾಯಿಸಬಲ್ಲರು, ಪಾರದರ್ಶಕವಾಗಿ ಆಡಳಿತವಾದರೆ ಅಭಿವೃದ್ಧಿ ತಾನಾಗಿಯೇ ಆಗುತ್ತದೆ ಎಂದರು.
ಶಾಸಕ ನಿಸರ್ಗ ನಾರಾಯಣಸ್ವಾಮಿ ಮಾತನಾಡಿ, ಮಹಿಳೆಯರು ಕೇವಲ ಹೈನೋದ್ಯಮಕ್ಕೆ ಸೀಮಿತವಾಗಬಾರದು. ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಳ್ಳಬೇಕು. ಬ್ಯಾಂಕುಗಳಲ್ಲಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ನೀಡಿದಷ್ಟು ಸಾಲಗಳನ್ನು ಯಾರಿಗೂ ನೀಡುತ್ತಿಲ್ಲ, ಮಹಿಳೆಯರು ಸಾಲ ಪಡೆದುಕೊಳ್ಳುವದಷ್ಟೆ ಅಲ್ಲದೆ ಸಾಲ ಮರುಫಾವತಿ ಮಾಡುವಲ್ಲಿಯೂ ತೋರಿಸುತ್ತಿರುವ ಕಾಳಜಿಯಿಂದ ಬ್ಯಾಂಕ್ಗಳೂ ಮುಂದೆ ಬರುತ್ತಿವೆ. ಇದೇ ಕಾಳಜಿಯನ್ನು ಸಹಕಾರ ಸಂಘದ ವಿಷಯದಲ್ಲೂ ತೋರಿಸಿದರೆ ಸಂಘವು ಅಭಿವೃದ್ಧಿಯಾಗುವುದರ ಜೊತೆಗೆ ಗ್ರಾಮದ ಏಳಿಗೆಗೆ ದಾರಿದೀಪವಾಗಲಿದೆ ಎಂದರು.
ಹಾಪ್ ಕಾಮ್ಸ್ ಉಪಾಧ್ಯಕ್ಷ ಮುನೇಗೌಡ, ಬಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಸೊಣ್ಣಪ್ಪ, ಎ.ಪಿ.ಎಂ.ಸಿ ಅಧ್ಯಕ್ಷ ಮಂಜುನಾಥ್, ಸಹಕಾರಿ ಯೂನಿಯನ್ ಅಧ್ಯಕ್ಷ ನಾಗರಾಜು, ಪಿಎಲ್ಡಿ ಬ್ಯಾಂಕ್ ಅಧ್ಯಕ್ಷ ಮುನಿರಾಜು, ಎ.ಪಿ.ಎಂ.ಸಿ ನಾಮಿನಿ ನಿರ್ದೇಶಕ ಜಯರಾಮೇಗೌಡ, ಜೆಡಿಎಸ್ ಹೋಬಳಿ ಘಟಕದ ಅಧ್ಯಕ್ಷ ಮುನಿರಾಜು, ಐಬಸಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮುನಿಯಮ್ಮ, ಡೈರಿ ಅಧ್ಯಕ್ಷೆ ಲಕ್ಷ್ಮಮ್ಮ, ನಿರ್ದೇಶಕರಾದ ಭಾಗ್ಯಮ್ಮ, ಮಂಜುಳಾ, ರತ್ನಮ್ಮ, ಭೈಯಮ್ಮ, ಮಂಜುಳಾ, ಭಾರತಿ, ಮಂಜುಳಾ, ಮುಖ್ಯ ಕಾರ್ಯನಿರ್ವಾಹಕಿ ಗಾಯಿತ್ರಿ, ಹಾಲು ಪರೀಕ್ಷಕಿ ಉಮಾ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.