ದೇವನಹಳ್ಳಿ: ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಛಾಪು ಮೂಡಿಸಿ ಪ್ರವರ್ಧಮಾನಕ್ಕೆ ಬರಬೇಕು ಎಂದು ನಾರಾಯಣ ಪಿಯು ಕಾಲೇಜಿನ ಪ್ರಾಂಶುಪಾಲೆ ನೀಲಾಮಣಿ ಹೇಳಿದರು.
ಇಲ್ಲಿನ ದಿನ್ನೆ ಸೋಲೂರು ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಮಹಿಳಾ ಕಾರ್ಯಕ್ರಮದ ವಿಚಾರಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಒಂದು ಕುಟುಂಬದಲ್ಲಿ ಹಲವಾರು ಸದಸ್ಯರು ಇದ್ದರೂ ಮಹಿಳೆಯ ಪಾತ್ರ ಅತಿ ಮುಖ್ಯವಾಗಿರುತ್ತದೆ. ಮಹಿಳೆ ತಾನು ಇಚ್ಛಿಸಿದಂತೆ ಆಗಬೇಕಾದರೆ ಮೊದಲಿಗೆ ಕುಟುಂಬದವರ ವಿಶ್ವಾಸ ಗಳಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಆರ್ಥಿಕವಾಗಿ ಸಬಲರಾಗಲು ಸ್ವಸಹಾಯ ಗುಂಪುಗಳು ಮತ್ತು ಸ್ತ್ರಿ ಶಕ್ತಿ ಗುಂಪುಗಳು ಹೆಚ್ಚು ಸಹಕಾರಿ. ಅಗತ್ಯ ಸೌಲಭ್ಯಗಳನ್ನು ಬಳಸಿಕೊಂಡು ಆರ್ಥಿಕ ಮಟ್ಟ ಹೆಚ್ಚಿಸಿಕೊಳ್ಳುವಂತಾಗಬೇಕು. ಹೆಣ್ಣು ಅಬಲೆಯಲ್ಲ. ಸಬಲೆಯಾಗಿದ್ದಾಳೆ. ವಿದ್ಯಾಭ್ಯಾಸ ಪಡೆದ ಮಹಿಳೆಯರು ಅವಿದ್ಯಾವಂತ ಮಹಿಳೆಯರಿಗೆ ಜಾಗೃತಿ ಮೂಡಿಸಬೇಕು’ ಎಂದು ಕರೆ ನೀಡಿದರು.
ವಿಶ್ವನಾಥಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಮೂರ್ತಿ ಮಾತನಾಡಿ, ‘ಮಹಿಳೆಯರಿಂದ ಸಾದ್ಯವಾಗದ್ದು ಯಾವುದೂ ಇಲ್ಲ, ಮಹಿಳೆಯರು ಮನಸ್ಸು ಮಾಡಬೇಕಷ್ಟೇ. ಸಂಘದಲ್ಲಿ ಗ್ರಾಮೀಣ ಭಾಗದ ಮಹಿಳೆಯರಿಗೆ ಸಿಗುವಂತಹ ಹಲವಾರು ಯೋಜನೆಗಳ ಮಾಹಿತಿಯನ್ನು ಪಡೆದುಕೊಂಡು ಅದರ ಸದುಪಯೋಗ ಮಾಡಿಕೊಳ್ಳಬೇಕು. ಸಾಲ ಸೌಲಭ್ಯ ಪಡೆಯುವ ಮಹಿಳಾ ಫಲಾನುಭವಿಗಳು ಬೇರೆ ಉದ್ದೇಶಗಳಿಗೆ ಬಳಸದೆ ಆರ್ಥಿಕ ಪ್ರಗತಿಗೆ ಮೀಸಲಿಡಬೇಕು. ಸರ್ಕಾರದ ವಿವಿಧ ಯೋಜನೆಯಡಿಯಲ್ಲಿ ರಿಯಾಯಿತಿ ದರದಲ್ಲಿಯೂ ಸಾಲ ಸೌಲಭ್ಯವಿದ್ದು, ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಬೇಕು. ಸಂಘವನ್ನು ಮತ್ತಷ್ಟು ಬೆಳೆಸುವ ನಿಟ್ಟಿನಲ್ಲಿ ಮಹಿಳೆಯರು ಶ್ರಮಿಸಬೇಕು’ ಎಂದರು.
ಯೋಜನೆಯ ತಾಲ್ಲೂಕು ಸಮನ್ವಯಾಧಿಕಾರಿ ಶರ್ಮಿಳಾ, ಸೇವಾಪ್ರತಿನಿಧಿ ಭಾಗ್ಯಮ್ಮ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.