ಮಾಗಡಿ: ‘ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳ ಆರೈಕೆಯನ್ನು ದೇವರ ಪೂಜೆ ಎಂದು ಭಾವಿಸಿ, ಆರೋಗ್ಯ ಇಲಾಖೆ ನೌಕರರು ಕಾರ್ಯ ನಿರ್ವಹಿಸಬೇಕು’ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಗೀತಾಗಂಗರಂಗಯ್ಯ ತಿಳಿಸಿದರು.
ಸರ್ಕಾರಿ ಆಸ್ಪತ್ರೆಗೆ ಬುಧವಾರ ಭೇಟಿ ನೀಡಿ ಅವರು ಮಾತನಾಡಿದರು.
‘ಪುರಾತನ ಕಾಲದಿಂದಲೂ ನಮ್ಮ ಸಮಾಜ ವೈದ್ಯರನ್ನು ದೇವರ ಸಮಾನರು ಎಂದು ಗೌರವಿಸುತ್ತ ಬಂದಿದೆ. ವೈದ್ಯ ವೃತ್ತಿ ಪವಿತ್ರವಾದುದು. ಮಾತೃ ಹೃದಯದ ವೈದ್ಯರಿದ್ದಾರೆ. ರೋಗಿಗಳನ್ನು ನಗುಮೊಗದಿಂದ ಮಾತನಾಡಿಸಿದರೆ ಅರ್ಧ ರೋಗ ವಾಸಿಯಾದಂತೆ. ಹಾಗೆಯೇ ಸರ್ಕಾರಿ ಆಸ್ಪತ್ರೆಗೆ ಬೇಕಾದ ಸವಲತ್ತು ದೊರಕಿಸಿಕೊಡಲು ಸಿದ್ದರಿದ್ದೇವೆ. ವೈದ್ಯರ ಬಳಿ ಬರುವ ರೋಗಿಗಳ ಸಹಾಯಕರು ಸೌಜನ್ಯದಿಂದ ವರ್ತಿಸಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯೆ ಸುಗುಣ ಕಾಮರಾಜ್ ಮಾತನಾಡಿ, ‘ಸೋಲೂರು ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಹಿಳಾ ಪ್ರಸೂತಿ ವೈದ್ಯರಿಲ್ಲದೆ ತೊಂದರೆಯಾಗಿದೆ. ಕೂಡಲೆ ಪ್ರಸೂತಿ ತಜ್ಞರನ್ನು ನೇಮಕ ಮಾಡಬೇಕು. ಗರ್ಭಿಣಿ ಮತ್ತು ಬಾಣಂತಿಯರಿಗೆ ಪೌಷ್ಟಿಕ ಆಹಾರವನ್ನು ಸಮರ್ಪಕವಾಗಿ ಒದಗಿಸಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣಪ್ಪ ಮಾತನಾಡಿ, ‘ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ ವೈದ್ಯರಿದ್ದಾರೆ. ಸ್ವಚ್ಛತೆ ಕಾಪಾಡಬೇಕು. ಬಡರೋಗಿಗಳ ಸೇವೆ ಸಲ್ಲಿಸುವುದು ಪುಣ್ಯದ ಕೆಲಸ’ ಎಂದರು.
ತಾಲ್ಲೂಕು ಪಂಚಾಯಿತಿ ಇಒ ಟಿ.ಪ್ರದೀಪ್ ಮಾತನಾಡಿ, ‘ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ರೋಗಿಗಳಿಗೆ ಸೂಕ್ತ ಆರೋಗ್ಯ ಸೇವೆ ದೊರಕಬೇಕು. ಜೂನ್ ವೇಳೆಗೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರತಿಯೊಂದು ಸರ್ಕಾರಿ ಶಾಲೆಗಳಿಗೂ ಫಸ್ಟ್ ಏಡ್ ಕಿಟ್ ಕೊಡಿಸುವ ವ್ಯವಸ್ಥೆ ಮಾಡುತ್ತೇವೆ’ ಎಂದರು.
ತಜ್ಞ ವೈದ್ಯರಾದ ಡಾ.ಪಾರೂಖ್, ಡಾ.ವಿವೇಕಾನಂದ ಸ್ವಾಮಿ, ಡಾ.ನಾಗನಾಥ್, ನರ್ಸಿಂಗ್ ಮುಖ್ಯಸ್ಥೆ ಜ್ಯೋತಿ, ಗುಣಶೇಖರ್, ಗೌತಮ ಸರ್ಕಾರಿ ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ವಿವರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.