ದೇವನಹಳ್ಳಿ: ’ಗ್ರಾಮೀಣ ಸೊಗಡಿನ ಕಲೆ ಗಟ್ಟಿಗೊಳಿಸಲು ನಡೆಯುತ್ತಿರುವ ’ಯುವಜನ ಮೇಳ’ ಕಲಾವಿದರ ಪ್ರತಿಭಾನ್ವೇಷಣೆ ವೇದಿಕೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಅನಂತಕುಮಾರಿ ಅಭಿಪ್ರಾಯಪಟ್ಟರು.
ಅಂಬೇಡ್ಕರ್ ಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಭಾಗಿತ್ವದಲ್ಲಿ ನಡೆದ ಜಿಲ್ಲಾ ಮಟ್ಟದ 2018–19ನೇ ಸಾಲಿನ ’ಯುವಜನ ಮೇಳ’ ಉದ್ಘಾಟಿಸಿ ಮಾತನಾಡಿದರು.
‘ನಾಡು ನುಡಿ ಸಂಸ್ಕೃತಿಗೆ ಇತಿಹಾಸವಿದೆ. ಇದನ್ನು ಭವಿಷ್ಯದ ಪೀಳಿಗೆಗೆ ಉಳಿಸಲು ಸರ್ಕಾರ ಪ್ರತಿವರ್ಷ ಯುವಜನ ಮೇಳ ನಡೆಸುತ್ತಿದೆ. ಜಿಲ್ಲಾ ಮತ್ತು ರಾಜ್ಯ ಮಟ್ಟದಿಂದ ರಾಷ್ಟ್ರ ಮಟ್ಟದವರೆಗೆ ಈ ಮೇಳ ನಡೆಸುವುದರಿಂದ ನೂರಾರು ಪ್ರತಿಭಾನ್ವಿತ ಕಲಾವಿದರು ತಮ್ಮ ಪ್ರತಿಭೆ ತೋರಿಸಿಲು ಉತ್ತಮ ವೇದಿಕೆಯಾಗಿದ್ದು, ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು’ ಎಂದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಭಾರತಿ ಲಕ್ಷಣ್ಗೌಡ ಮಾತನಾಡಿ, ಸರ್ಕಾರದ ಉತ್ತಮ ಗುಣಮಟ್ಟದ ಕಾರ್ಯಕ್ರಮ ಇದಾಗಿದ್ದು, ಕಲಾವಿದರ ನಿರಾಸಕ್ತಿಯೋ ಅಥವಾ ಆಯೋಜಕರ ವೈಫಲ್ಯವೋ ಈ ಕಾರ್ಯಕ್ರಮದಲ್ಲಿ ಬೆರಳೆಣಿಕೆ ಕಲಾವಿದರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚಿನ ದಿನಗಳಲ್ಲಿ ಸಾಂಸ್ಕೃತಿಕ ಕಲೆಯಲ್ಲಿ ಹೆಚ್ಚಿನ ಕಲಾವಿದರು ಆಸಕ್ತಿ ತೋರುತ್ತಿದ್ದಾರೆ. ಇದಕ್ಕೆ ಶಾಲೆಗಳಲ್ಲಿ ನಡೆಯುವ ಪ್ರತಿಭಾ ಕಾರಂಜಿಯೇ ಪ್ರೇರಣೆ. ಸಾಂಸ್ಕೃತಿಕ ಚಟುವಟಿಕೆಗಳು ಇಲಾಖೆ ವ್ಯಾಪ್ತಿ ಮಿತಿಯಲ್ಲಿ ಇರದೆ ಸಾರ್ವಜನಿಕರಿಗೆ ಮುಕ್ತವಾಗಿ ಪ್ರಚಾರ ಸಿಗಬೇಕು ಎಂದರು.
ಈ ಸಂದರ್ಭದಲ್ಲಿ ಕಾರ್ಯಕ್ರಮ ಮುಂದೂಡಿ ಎಂದು ಕಲಾವಿದರು ಒತ್ತಾಯಿಸಿದರು. ವಿಚಲಿತರಾದ ಸಹಾಯಕ ನಿರ್ದೇಶಕಿ ದೇವಿಕಾ, ಕಳೆದ ವರ್ಷ ಭಾಗವಹಿಸಿದ ಕಲಾವಿದರ ತಂಡಗಳಿಗೆ ಚೆಕ್ ನೀಡಿದ್ದೇನೆ ಎಂದು ಕೆಲ ಕಲಾವಿದರತ್ತ ತೋರಿಸಿ ಸಮಜಾಯಿಸಿ ನೀಡಲು ಮುಂದಾದರು. ಆದರೂ, ಕೆಲ ಕಲಾವಿದರು ವೇದಿಕೆಯಿಂದ ಹೊರ ನಡೆದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜಯಮ್ಮ ಲಕ್ಷ್ಮಿನಾರಾಯಣ, ಉಪಾಧ್ಯಕ್ಷೆ ಕನ್ಯಾಕುಮಾರಿ, ಜಿಲ್ಲಾ ಪಂಚಾಯಿತಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರಾಧಮ್ಮ ಮುನಿರಾಜು, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ನಂದಿನಿ, ಸದಸ್ಯೆ ಚೈತ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ದೇವಿಕಾ, ಅರುಂಧತಿ, ಸೇವಾ ಸಂಸ್ಥೆ ಅಧ್ಯಕ್ಷೆ ಡಿ.ಎಂ.ವೇಣುಗೋಪಾಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.